ಕನಕಪುರ: ರೈತರ ಕೃಷಿ ಅಭಿವೃದ್ಧಿಗಾಗಿ ಅವಧಿ ಸಾಲ ಮತ್ತು ಬೆಳೆ ಸಾಲವನ್ನು ನೀಡಲಾಗುತ್ತಿದೆ. ರೈತರ ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿಜಯ ಬ್ಯಾಂಕ್ ಪ್ರಾದೇಶಿಕ ಕಚೇರಿ ಮಂಡ್ಯದ ಮುಖ್ಯ ಪ್ರಬಂಧಕ ಸತೀಶ್ ಪಟ್ಕರ್ ತಿಳಿಸಿದರು.
ನಗರದ ವಿಜಯ ಬ್ಯಾಂಕ್ನಲ್ಲಿ ಗುರುವಾರ ನಡೆದ ರೈತರ ಕೃಷಿಸಾಲ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತರು ಜಮೀನುಗಳಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ಬೆಳೆಸಾಲವನ್ನು ಪಡೆಯಬಹುದಾಗಿದೆ. ಪಡೆದ ಬೆಳೆಸಾಲಕ್ಕೆ ವಿಮೆ ಮಾಡಿಸಬಹುದಾಗಿದೆ. ಒಂದು ವೇಳೆ ತಾವು ಕೈಗೊಂಡ ಬೆಳೆ ಪ್ರಕೃತಿವಿಕೋಪಕ್ಕೆ ಹಾನಿಯಾದರೆ ವಿಮಾ ಮೊತ್ತ ಸಿಗಲಿದೆ ಎಂದರು.
ಅದೇ ರೀತಿ ರೈತರು ಸಹ ವಿಮೆಯನ್ನು ಮಾಡಿಸಿಕೊಳ್ಳಬಹುದು, 60 ವರ್ಷ ಆದ ಮೇಲೆ ಸರ್ಕಾರಿ ನೌಕರರಂತೆ ಪಿಂಚಣಿ ಪಡೆಯಬಹುದು. ಅಂತಹ ಯೋಜನೆಗಳು ಬ್ಯಾಂಕ್ನಲ್ಲಿದ್ದು ರೈತರು ಅದರ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.
16 ಮಹಿಳಾ ಸ್ತ್ರೀ ಶಕ್ತಿ ಗುಂಪುಗಳು ಸೇರಿದಂತೆ ವೈಯಕ್ತಿಕ ಸಾಲ ಹಾಗೂ ಬೆಳೆಸಾಲಕ್ಕೆ ಒಟ್ಟು ₹50 ಲಕ್ಷ ಸಾಲ ಮಂಜೂರಾಗಿದ್ದು ಎಲ್ಲರಿಗೂ ಸಾಲದ ಚೆಕ್ನ್ನು ನೀಡಲಾಯಿತು.
ಬ್ಯಾಂಕಿನ ವ್ಯವಸ್ಥಾಪಕ ಎಲ್.ಆರ್.ನರೇರ್, ಸಹಾಯಕ ಶಾಖಾ ಪ್ರಬಂಧಕ ಸೋಮಶೇಖರ್, ಕೃಷಿಅಧಿಕಾರಿ ವೇಣುಗೋಪಾಲ್ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಪಾಲ್ಗೊಂಡಿದ್ದರು.