ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಗೊಂಬೆಗಳ ಲೋಕ ಅನಾವರಣ

ರಾಮನಗರ ಜಾನಪದ ಲೋಕದ ಆವರಣದಲ್ಲಿ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ
Last Updated 22 ಸೆಪ್ಟೆಂಬರ್ 2017, 4:59 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಅರ್ಚಕರಹಳ್ಳಿಯ ಬಳಿ ಇರುವ ಜಾನಪದ ಲೋಕದ ಆವರಣದಲ್ಲೀಗ ದಸರಾ ಗೊಂಬೆಗಳೇ ಪ್ರಮುಖ ಆಕರ್ಷಣೆಯಾಗಿವೆ. 800ಕ್ಕೂ ಹೆಚ್ಚು ಗೊಂಬೆಗಳನ್ನು ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.

ನವರಾತ್ರಿ ಉತ್ಸವದ ಅಂಗವಾಗಿ ಈ ಪ್ರದರ್ಶನ ನಡೆದಿದ್ದು, ಬಗೆಬಗೆಯ ಗಾತ್ರ, ವಿನ್ಯಾಸಗಳ ಗೊಂಬೆಗಳು ಸೂಜಿಗಲ್ಲಿನಂತೆ ಜನರನ್ನು ಸೆಳೆಯುತ್ತಿವೆ. ರಾಮ–ಲಕ್ಷ್ಮಣ, ರಾವಣ, ಕೃಷ್ಣರ ಆದಿಯಾಗಿ ಎಲ್ಲ ಬಗೆಯ ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳನ್ನು ಒಂದೇ ವೇದಿಕೆಯ ಮೇಲೆ ಸೃಜಿಸಲಾಗಿದೆ.

ಇಡೀ ಪ್ರದರ್ಶನಕ್ಕೆ ಮುಕುಟವಿ ದ್ದಂತೆ ಶಿವನ ಮೂರ್ತಿಯನ್ನು ಮೇಲೆ ಕೂರಿಸಲಾಗಿದೆ. ವೇದಿಕೆಯ ನಂತರದಲ್ಲಿ ಪಟ್ಟದ ಗೊಂಬೆಗಳು ವಿರಾಜಮಾ ನವಾಗಿವೆ. ಅದಕ್ಕೂ ತುಸು ಮೇಲೆ ಚಾಮುಂಡಿಬೆಟ್ಟದ ಮಾದರಿ ಗಮನ ಸೆಳೆಯುತ್ತಿದೆ.

ಗಣೇಶ–ಸುಬ್ರಹ್ಮಣ್ಯ, ಆದಿಲಕ್ಷ್ಮಿನಾ ರಾಯಣ ಮೊದಲಾದ ಗೊಂಬೆಗಳನ್ನು ಇಡಲಾಗಿದೆ. ಪಟ್ಟಾಭಿಷಕ್ತನಾದ ಶ್ರೀರಾಮ, ಆತನ ಮಡದಿ ಸೀತೆ, ರಾಮಲಕ್ಷ್ಮಣರ ಮೂರ್ತಿಗಳು ಒಂದೆಡೆ ಇದ್ದು, ಅಹಲ್ಯಾ ಶಾಪ ವಿಮೋಚನೆಯ ಪ್ರಸಂಗವನ್ನೂ ಸೃಜಿಸಲಾಗಿದ್ದು, ರಾಮಾಯಣದ ಕಥೆ ಹೇಳುತ್ತಿವೆ.

ವೇದಿಕೆಯ ಎಡಭಾಗದಲ್ಲಿ ವಿಷ್ಣು ವಿನ ಒಂಬತ್ತು ಅವತಾರಗಳನ್ನು ಬಿಂಬಿಸುವ ಗೊಂಬೆಗಳನ್ನು ಇಡಲಾ ಗಿದೆ. ಇಂತಹವುಗಳನ್ನು ಕಾಣುವುದು ಅಪರೂಪವೇ ಸರಿ ಎನ್ನುತ್ತಾರೆ ಆಯೋಜಕರು.

ಸ್ವಾತಂತ್ರ್ಯ ಹೋರಾಟಗಾರರ ನೆನಪು: ಹಿರಿಯ ಸ್ವಾತಂತ್ರ್ಯ ಹೋರಾಟಗಾ ರರನ್ನು ನೆನಪಿಸುವ ಗೊಂಬೆಗಳೂ ಪ್ರದರ್ಶನದಲ್ಲಿವೆ. ಗಾಂಧಿ, ನೆಹರೂ ಸಹಿತ ಮಹಾತ್ಮರ ಪ್ರತಿಕೃತಿಗಳನ್ನು ಇಡಲಾಗಿದೆ. ಸಣ್ಣ–ಸಣ್ಣ ಗೊಂಬೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಆದಿವಾ ಸಿಗಳ ಸಂಸ್ಕೃತಿಯನ್ನು ಬಿಂಬಿಸುವ ಪುಟ್ಟ ಗೊಂಬೆಗಳು ವಿಶೇಷ ಆಕರ್ಷಣೆ ಯಾಗಿವೆ. ಮಹಾರಾಷ್ಟ್ರದ ಶೈಲಿಯ ನರ್ತಿಸುವ ಗೊಂಬೆಗಳು, ನರ್ತನ, ಮದುವೆ ಮೆರವಣಿಗೆ ಮೊದ ಲಾದ ಸಮಾರಂಭಗಳನ್ನು ಜ್ಞಾಪಿಸುವಂತೆ ಇವೆ.

ಎರಡು ದಶಕದ ಪ್ರಯತ್ನ: ಜಾನಪದ ಲೋಕವು 1994ರಲ್ಲಿ ಉದ್ಘಾಟನೆಗೊಂಡಿದ್ದು, 1996ರಿಂದ ಇಲ್ಲಿ ನವರಾತ್ರಿ ಸಂದರ್ಭದಲ್ಲಿ ಗೊಂಬೆಗಳ ಪ್ರದರ್ಶನವನ್ನು ಆಯೋಜಿಸುತ್ತಾ ಬರಲಾಗಿದೆ.

‘ಜಾನಪದ ಲೋಕದ ನಿರ್ಮಾರ್ತೃ ಎಚ್.ಎಲ್‌. ನಾಗೇಗೌಡರಿಗೆ ದಸರಾ ಗೊಂಬೆಗಳ ಪ್ರದರ್ಶನ ಎಂದರೆ ವಿಶೇಷ ಆಸಕ್ತಿ ಇತ್ತು. ಜಾನಪದ ಲೋಕವು ಸದಾ ಚಟುವಟಿಕೆಯಿಂದ ಕೂಡಿರಬೇಕು. ನಮ್ಮ ಕಲೆ–ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನ ಆಗಬೇಕು ಎನ್ನುವ ಆಶಯ ಇತ್ತು. ಅವರ ಒತ್ತಾಸೆಯಿಂದಲೇ ಈ ಪ್ರದರ್ಶನವು ಆರಂಭಗೊಂಡಿತು. ಆರಂಭದಲ್ಲಿ 15–20 ಗೊಂಬೆಗಳನ್ನು ಕೂರಿಸುತ್ತಿದ್ದೆವು. ಈಗ 700–800 ಗೊಂಬೆಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದಾಗಿದೆ’ ಎನ್ನುತ್ತಾರೆ ಈ ಪ್ರದರ್ಶನದ ಉಸ್ತುವಾರಿ ಹೊತ್ತಿರುವ ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಮು.

ದಾನಿಗಳೇ ಕೊಟ್ಟದ್ದು: ಪ್ರದರ್ಶನಕ್ಕೆ ಇಡಲಾಗಿರುವ ಎಲ್ಲ ಗೊಂಬೆಗಳನ್ನು ದಾನಿಗಳು ಕೊಡುಗೆಯಾಗಿ ನೀಡಿರುವುದು ವಿಶೇಷ.

‘ಮೊದಲೆಲ್ಲ ನಮ್ಮಲ್ಲಿ ಬೆರಳೆಣಿಕೆಯಷ್ಟು ಇದ್ದವು. ಈ ವರ್ಷ ಪ್ರದರ್ಶನ ನೋಡಿ ಕೊಂಡು ಹೋದವರು ಮುಂದಿನ ಪ್ರದರ್ಶನದ ಹೊತ್ತಿಗೆ ತಮ್ಮಲ್ಲಿನ ಹಳೆಯ ಗೊಂಬೆಗಳನ್ನು ತಂದು ಕೊಡುತ್ತಿದ್ದರು. ಹೀಗೆ ಬೆಳೆಯುತ್ತಾ ಹೋಗಿದ್ದು, ಈಗ ಸರಿಸುಮಾರು 1,500 ಗೊಂಬೆಗಳು ನಮ್ಮಲ್ಲಿ ಸಂಗ್ರಹಗೊಂಡಿವೆ’ ಎಂದು ಶಿವರಾಮು ಹೇಳುತ್ತಾರೆ.

ಶತಮಾನದಷ್ಟು ಹಳೆಯವು: ದಸರಾ ಗೊಂಬೆಗಳನ್ನು ಕೂರಿಸುವ ಪರಿ ಪಾಠವು ಶತಮಾನಗಳಷ್ಟು ಹಳೆಯದು. ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಕೆಲವು ಗೊಂಬೆಗಳಿಗೂ ಶತಮಾನಗಳ ಇತಿಹಾಸ ಇದೆ. ಸುಮಾರು 250 ವರ್ಷಗಳಷ್ಟು ಹಳೆಯದಾದ ಕೆಲವು ಗೊಂಬೆಗಳು ಇಲ್ಲಿವೆ.

ನೀತಿಕಥೆಗಳ ಪಾಠ: ಗೊಂಬೆಗಳ ಪ್ರದರ್ಶನವು ಮಕ್ಕಳಿಗೆ ಆಕರ್ಷಣೆ ಆಗುವ ಜೊತೆಗೆ ಅವರಿಗೆ ನೀತಿ ಕಥೆಗಳನ್ನು ಹೇಳುವ ಉದ್ದೇಶವನ್ನೂ ಒಳಗೊಂಡಿದೆ. ಪೋಷಕರು ತಮ್ಮ ಮಕ್ಕಳಿಗೆ ಕಥೆಗಳನ್ನು ಹೇಳುವುದಕ್ಕೆ ಇಲ್ಲಿನ ರೂಪಕಗಳನ್ನು ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಆಯೋಜಕರು.

**

ಉದ್ಘಾಟನೆ

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಅವರು ಗುರುವಾರ ದಸರಾ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

‘ಎರಡು ದಶಕಗಳಿಂದ ಇಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಒಂದು ತಿಂಗಳ ಕಾಲ ಪ್ರದರ್ಶನ ನಡೆಯಲಿದೆ. ದಸರಾ ರಜೆಗೆಂದು ಬರುವ ಪ್ರವಾಸಿಗರು ಇವುಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ’ ಎಂದು ಅವರು ಹೇಳಿದರು.

**

ಇಷ್ಟೆಲ್ಲ ವೈವಿಧ್ಯಮಯ ಗೊಂಬೆಗಳು ಒಂದೇ ವೇದಿಕೆಯಲ್ಲಿ ಕಾಣಸಿಗುವುದು ಅಪರೂಪ. ನಿಜಕ್ಕೂ ಈ ಪ್ರದರ್ಶನ ಉಪಯುಕ್ತವಾಗಿದೆ.

ಶಾರದಾ, ಪ್ರವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT