ಬೆಂಗಳೂರು: ಇತ್ತೀಚೆಗೆ ಅಪಹರಣಕ್ಕೊಳಗಾಗಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಅವರ ಪುತ್ರ ಶರತ್(19) ಪ್ರಕರಣ ತಿರುವು ಪಡೆದುಕೊಂಡಿದೆ. ₹ 50ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು ಇದೀಗ ಶರತ್ನನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ.
ಶರತ್ನ ಐವರು ಸ್ನೇಹಿತರು ಮತ್ತು ಅಕ್ಕನ ಕ್ಲಾಸ್ಮೇಟ್ ವಿಶಾಲ್ ಸೇರಿ ಒಟ್ಟು ಆರು ಮಂದಿ ಪರಿಚಿತರೇ ಕೊಲೆ ಮಾಡಿದ್ದು, ದೇಹವನ್ನು ಏರೋವಳ್ಳಿ ಕೆರೆ ಬಳಿ ಬಿಸಾಡಿದ್ದಾರೆ. ಪ್ರಕರಣವನ್ನು ಭೇದಿಸಿರುವ ಜ್ಞಾನಭಾರತಿ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣ: ಇತ್ತೀಚೆಗೆನಿರಂಜನ್ ಅವರು ಮಗನಿಗೆ ರಾಯಲ್ ಎನ್ಫೀಲ್ಡ್ ಬೈಕ್ ಕೊಡಿಸಿದ್ದರು. ಸ್ನೇಹಿತರ ಜತೆ ಬೈಕ್ನಲ್ಲಿ ಸುತ್ತಾಡಿ ಬರುವುದಾಗಿ ಹೇಳಿ ಹೋಗಿದ್ದ ಆತ ರಾತ್ರಿಯಾದರೂ ಹಿಂದಿರುಗಿರಲಿಲ್ಲ.
ಆತಂಕಗೊಂಡ ಪೋಷಕರು ಸಂಬಂಧಿಕರು ಹಾಗೂ ಶರತ್ನ ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದ್ದಾರೆ. ಮಗ ಪತ್ತೆಯಾಗಿರಲಿಲ್ಲ. ಕೆಲಹೊತ್ತಿನಲ್ಲಿ ನಿರಂಜನ್ ಅವರಿಗೆ ಕರೆ ಮಾಡಿದ ದುಷ್ಕರ್ಮಿ ‘ನಿಮ್ಮ ಮಗನನ್ನು ಅಪಹರಿಸಿದ್ದೇವೆ. ₹ 50 ಲಕ್ಷ ಹಣ ನೀಡಿದರೆ ಅವನನ್ನು ಬಿಟ್ಟು ಕಳುಹಿಸುತ್ತೇವೆ’ ಎಂದು ಕರೆ ಮಾಡಿದ್ದರು. ಜತೆಗೆ ಶರತ್ನನ್ನು ಕೂಡಿಹಾಕಿದ ವಿಡಿಯೊವನ್ನು ಚಿತ್ರೀಕರಿಸಿ ನಿರಂಜನ್ ಅವರ ಮೊಬೈಲ್ಗೆ ಕಳುಹಿಸಿದ್ದರು.
ವಿಡಿಯೋದಲ್ಲಿ ಶರತ್, ‘ಅಪ್ಪ ತುಂಬಾ ತೊಂದರೆ ಕೊಡುತ್ತಿದ್ದಾರೆ. ₹ 50 ಲಕ್ಷ ಹಣ ಕೊಟ್ಟರೆ ನನ್ನನ್ನು ಬಿಡುತ್ತಾರೆ. ದಯವಿಟ್ಟು ಅವರಿಗೆ ಹಣ ತಂದುಕೊಡಿ’ ಎಂದು ಹೇಳಿದ್ದ. ಅಪಹರಣಕಾರರು ವಿಡಿಯೊ ಕಳುಹಿಸಿದ್ದ ಮೊಬೈಲ್ ಸಂಖ್ಯೆಯ ಕರೆಗಳ ವಿವರಗಳನ್ನು (ಸಿಡಿಆರ್) ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು.