ಸುರಪುರ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ಬುಧವಾರ ಸಮಿತಿಯ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. 2017-–18ನೇ ಸಾಲಿಗಾಗಿ ₹4 ಕೋಟಿ ಮೊತ್ತದ ಕ್ರಿಯಾ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು. ಈವರೆಗಿನ ಸಮಿತಿಯ ಒಟ್ಟು ಆದಾಯ ₹ 9, 9 ಕೋಟಿ ಲೆಕ್ಕವನ್ನು ಪರಿಶೀಲಿಸಲಾಯಿತು. ನಂತರ ಅಭಿವೃದ್ಧಿಗೆ ಸಂಬಂಧಿಸಿದ ಕೆಲ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ‘ಸದಸ್ಯರು ಎಪಿಎಂಸಿ ಅಭಿವೃದ್ದಿಗೆ ಪ್ರಾಮಾ ಣಿಕವಾಗಿ ಪ್ರಯತ್ನಿಸಬೇಕು. ವರ್ತಕರಿಂದ ರೈತರ ಶೋಷಣೆ ತಪ್ಪಿಸಬೇಕು. ಯಾವುದೇ ಕಾರಣಕ್ಕೆ ರೈತರಿಗೆ ತೊಂದರೆಯಾಗದಂತೆ ಮಾರುಕಟ್ಟೆ ವ್ಯವಹಾರ ಸರಿಯಾಗಿ ನೋಡಿಕೊಳ್ಳಬೇಕು. ದೂರುಗಳು ಬಂದಲ್ಲಿ ಸಹಿಸಲಾಗುವುದಿಲ್ಲ. ಹುಣಸಗಿ, ಕೆಂಭಾವಿ ಉಪ ಮಾರುಕಟ್ಟೆ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು’ ಎಂದರು.
ಸಭೆಯಲ್ಲಿ ಮಾಜಿ ಸಚಿವ ಖಮರುಲ್ ಇಸ್ಲಾಂ ಮತ್ತು ಎಪಿಎಂಸಿ ಸದಸ್ಯ ಬಸವಪ್ರಭು ಪಾಟೀಲ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಉಪಾಧ್ಯಕ್ಷ ರಾಜಶೇಖರ ದೇಸಾಯಿ, ಎಪಿಎಂಸಿ ಸದಸ್ಯರಾದ ಮಲ್ಲಿಕಾರ್ಜುನ, ಶಂಕ್ರಮ್ಮ ಪೂಜಾರಿ, ಮಲ್ಲಣ್ಣ ಸಾಹುಕಾರ ಮುಧೋಳ ನರಸಿಂಗಪೇಟೆ, ಅಮರೇಶ ಕಟ್ಟಿಮನಿ ಯಡ್ಡಳ್ಳಿ, ಸಣಕೆಪ್ಪ ಸಾಹುಕಾರ, ರಾಯಪ್ಪ, ಜಯಶ್ರೀ, ನಾಗಣ್ಣ ಸಾಹುಕಾರ್ ದಂಡಿನ ಹುಣಸಗಿ, ಕಾರ್ಯದರ್ಶಿ ರಿಯಾಜುರ್ ರೆಹಮಾನ್ ಮತ್ತು ಸಿಬ್ಬಂದಿ ಇದ್ದರು.