ಮೂಡಿಗೆರೆ: ತಾಲ್ಲೂಕಿನ ಬಣಕಲ್ ಹೋಬಳಿಯ ಕೋಗಿಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯು ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಬಣಕಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ 234ರ ವಿಲ್ಲುಪುರಂ –ಮಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು 20 ವರ್ಷಗಳ ಹಿಂದೆ ಡಾಂಬರು ಕಂಡಿದ್ದು, ಅಂದಿನಿಂದ ಇಲ್ಲಿಯವರೆಗೆ ಮರು ಡಾಂಬರೀಕರಣ ಕೈಗೊಳ್ಳದ ಕಾರಣ ಸುಮಾರು ಎಂಟು ಕಿ.ಮೀ. ರಸ್ತೆಯು ಹೊಂಡಗುಂಡಿಗಳಿಂದ ತುಂಬಿದೆ. ಹೀಗಾಗಿ, ಬಣಕಲ್ ಪಟ್ಟಣಕ್ಕೆ ಬರಲು ಜನರು ಹರಸಾಹಸ ಪಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಎಂಟು ಕಿ.ಮೀ. ದೂರದಲ್ಲಿರುವ ಕೋಗಿಲೆ ಗ್ರಾಮ ಮಾತ್ರವಲ್ಲದೇ, ಇದೇ ರಸ್ತೆಯ ಮೂಲಕ ಬಣಕಲ್ ವಿಲೇಜ್, ಕೋಡೇಬೈಲ್ ಗ್ರಾಮಗಳಿಗೂ ತೆರಳಬೇಕಾಗಿದೆ. ಅಲ್ಲದೆ, ಈ ರಸ್ತೆಯು ತಾಲ್ಲೂಕಿನ ಪ್ರಸಿದ್ಧ ಪ್ರವಾಸಿತಾಣವಾದ ದೇವರಮನೆಗೆ ಜೋಡಣಾ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಸಾಗುವ ಪ್ರವಾಸಿಗರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ರಸ್ತೆಯ ಮೂಲಕ ಪ್ರತಿನಿತ್ಯ 25ಕ್ಕೂ ಅಧಿಕ ವಿದ್ಯಾರ್ಥಿಗಳು ಬಣಕಲ್ ಪಟ್ಟಣಕ್ಕೆ ಶಾಲಾ ಕಾಲೇಜಿಗೆ ತೆರಳುತ್ತಿದ್ದು, ರಸ್ತೆ ಗುಂಡಿ ಬಿದ್ದಿರುವುದರಿಂದ ಶಾಲಾ ವಾಹನಗಳು ಗ್ರಾಮಕ್ಕೆ ಬರದೇ, ನಡದೇ ಸಾಗುವ ದುಸ್ಥಿತಿ ಬಂದೊದಗಿದೆ.
ಕೋಗಿಲೆ ಹಾಗೂ ಸುತ್ತಮುತ್ತಲ ಗ್ರಾಮಗಳು ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಇದೀಗ ಕಾಫಿ, ಭತ್ತ ಮುಂತಾದ ಬೆಳೆಗಳಿಗೆ ಗೊಬ್ಬರ ಹಾಕಬೇಕಾಗಿದ್ದು, ಪಟ್ಟಣದಿಂದ ಗೊಬ್ಬರ ಸಾಗಿಸಲು ವಾಹನಗಳು ಬರದೇ ರೈತಾಪಿ ವರ್ಗ ಪರಿತಪಿಸುತ್ತಿದೆ.
‘ಗ್ರಾಮಕ್ಕೆ ಖಾಸಗಿ ವಾಹನಗಳು ಬಾಡಿಗೆ ಬರಲು ಒಪ್ಪುವುದಿಲ್ಲ. ಯಾರಿಗಾದರೂ ಅನಾರೋಗ್ಯ ಸಂಭವಿಸಿದರೆ ವಾಹನ ಮಾಲೀಕರ ಮನವೊಲಿಸಿ ದುಬಾರಿ ಬಾಡಿಗೆ ನೀಡಿ ಪಟ್ಟಣಕ್ಕೆ ಕರೆದೊಯ್ಯಬೇಕಾದ ಸ್ಥಿತಿ ಉಂಟಾಗಿದೆ. ಪ್ರತಿನಿತ್ಯ ಈ ಗ್ರಾಮಗಳು ಕಾಡಾನೆ ದಾಳಿಯನ್ನು ಎದುರಿಸುತ್ತಿದ್ದು, ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಕೂಡ ಲಭಿಸುವುದಿಲ್ಲ. ಕೋಗಿಲೆ ಗ್ರಾಮವು ಅನೇಕ ಮೂಲ ಸೌಲಭ್ಯಗಳನ್ನು ಎದುರಿಸುತ್ತಿದ್ದು, ಕೂಡಲೇ ಪರಿಹರಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ರಸ್ತೆ ದುರಸ್ತಿ ಪಡಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ, ಗ್ರಾಮಕ್ಕೆ ಯಾರೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಬಂದು ಸಮಸ್ಯೆ ಆಲಿಸಿಲ್ಲ. ಪರಿಶಿಷ್ಟ ಜನರೇ ಹೆಚ್ಚಾಗಿ ವಾಸಿಸುತ್ತಿರುವ ಕೋಗಿಲೆ, ಕೊಡೇಬೈಲ್, ದೇವರಮನೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಮೂಲಸೌಲಭ್ಯಗಳಿಂದ ವಂಚಿತವಾಗಿ ಜೀವನ ನಡೆಸುತ್ತಿದ್ದು, ಸರ್ಕಾರವು ಕೂಡಲೇ ರಸ್ತೆ, ವಿದ್ಯುತ್ನಂತಹ ಮೂಲಸೌಲಭ್ಯ ಒದಗಿಸಬೇಕು’ ಎಂದು ಗ್ರಾಮಸ್ಥ ಕೋಗಿಲೆ ರಂಜಿತ್ ಒತ್ತಾಯಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.