ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು ಲೇಖಕ ಯೋಗೇಶ್ ಮಾಸ್ಟರ್ ಅವರ ಹೇಳಿಕೆಯನ್ನು ಶುಕ್ರವಾರ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯೋಗೇಶ್, ‘ಎಸ್ಐಟಿ ತಂಡವು ಎರಡು ಗಂಟೆಗಳ ವರೆಗೆ ನನ್ನ ಹೇಳಿಕೆ ದಾಖಲಿಸಿಕೊಂಡಿತು. 2015ರಿಂದ ಇದುವರೆಗೂ ನನ್ನ ಹತ್ಯೆಗೆ ನಡೆದಿರುವ ಯತ್ನಗಳು ಹಾಗೂ ಗೌರಿ ಅವರೊಂದಿಗಿನ ಒಡನಾಟದ ಬಗ್ಗೆ ಮಾಹಿತಿ ಪಡೆದರು’ ಎಂದರು.
‘ಗೌರಿ ಲಂಕೇಶ್ ಹಿಂದೂ ಧರ್ಮದ ವಿರೋಧಿ ಆಗಿರಲಿಲ್ಲ. ಹಿಂದೂ ಹೆಸರಿನಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯದ ಯುವಕರನ್ನು ಕೋಮುವಾದಕ್ಕೆ ಬಲಿ ಕೊಡುವುದನ್ನು ವಿರೋಧಿಸುತ್ತಿದ್ದರು. ಈ ವಿಷಯವನ್ನು ಅಧಿಕಾರಿಗಳಿಗೆ ಹೇಳಿದ್ದೇನೆ. ಪ್ರಕರಣ ಸಂಬಂಧ ಪ್ರಣವಾನಂದ ಸ್ವಾಮೀಜಿ ಅವರನ್ನು ವಿಚಾರಣೆಗೆ ಒಳಪಡಿಸುವಂತೆಯೂ ಅಧಿಕಾರಿಗಳನ್ನು ಒತ್ತಾಯಿಸಿದ್ದೇನೆ’ ಎಂದರು.