ಮಾಲೂರು: ಗೊಂಬೆಗಳ ಸಿಂಗಾರವಿಲ್ಲದೇ ನವರಾತ್ರಿ ಸಂಭ್ರಮವಿಲ್ಲ. ಪುರಾಣ ಕಾಲ ಮತ್ತು ವರ್ತಮಾನಗಳನ್ನು ಬೆಸೆಯುವ ಗೊಂಬೆಗಳು ಆಯುಧಪೂಜೆ ಮತ್ತು ವಿಜಯದಶಮಿಯ ಕತೆಗಳನ್ನಷ್ಟೇ ಹೇಳುವುದಿಲ್ಲ. ಸಮಕಾಲೀನ ಜಗತ್ತಿನ ವ್ಯಾಖ್ಯಾನಕ್ಕೂ ಅವಕಾಶದ ಬಾಗಿಲುಗಳನ್ನು ತೆರೆಯುತ್ತವೆ.
ನವರಾತ್ರಿ ಪ್ರಯುಕ್ತ ಪಟ್ಟಣದ ಗಾಂಧಿ ಸರ್ಕಲ್ನ ವಿಜಯಲಕ್ಷ್ಮಿ ಪ್ರಕಾಶ್ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಮೈಸೂರು ಸಂಪ್ರದಾಯಿಕ ದಸರಾ ಗೊಂಬೆಗಳು ನೋಡುಗರ ಮನ ಸೆಳೆಯುತ್ತಿವೆ.
ಇವರ ಮನೆಯಲ್ಲಿ ಗೊಂಬೆಗಳ ಲೋಕವೇ ಅನಾವರಣಗೊಂಡಿದೆ. ಅವು ಕೇವಲ ಗೊಂಬೆಗಳಲ್ಲ. ಭಾರತದ ಪೌರಾಣಿಕ ಮತ್ತು ಚಾರಿತ್ರಿಕ ಕಥನಗಳನ್ನು ಹೇಳುವುದು ವಿಶೇಷ.ರಾಮಾಯಣ,ಮಹಾಭಾರತ,ಶ್ರೀಕೃಷ್ಣ ಲೀಲೆ,ಗೀತೋಪದೇಶ, ಜಂಬೂ ಸವಾರಿ,ದಶಾವತಾರದ ಕಥನಗಳನ್ನು ಹೇಳುತ್ತವೆ.
ತಿರುಪತಿಯಲ್ಲಿ ನಡೆಯುವ 9 ದಿನದ ಬ್ರಹ್ಮೋತ್ಸವ,ಭಾರತೀಯ ಸಮಾಜದ ಕುಟುಂಬ ಜೀವನದ ಚಕ್ರ ವಿವರಿಸುತ್ತವೆ. ವಿವಿಧ ರಾಜ್ಯಗಳ ಮಹಿಳೆಯರ ಉಡುಪು ವಿಶೇಷಗಳನ್ನು ಈ ಗೊಂಬೆಗಳು ತೋರುತ್ತವೆ.
ಗಿನ ಕೈಗಾರೀಕರಣಕ್ಕೆ ತಾಲ್ಲೂಕು ಒಗ್ಗಿಕೊಳ್ಳುತ್ತಿರುವುದು. 2020ರಷ್ಟೊತ್ತಿಗೆ ಅದು ಬದಲಾಗಬಹುದಾದ ಮುನ್ನೋಟಗಳ ಬಗ್ಗೆಯೂ ಈ ಗೊಂಬೆಗಳು ವಿವರಿಸುತ್ತವೆ. ಗ್ರಾಮೀಣ ಸಂಸ್ಕೃತಿ ಕ್ರಮೇಣ ದೂರವಾಗಿ ನಗರ ಪ್ರದೇಶದ ಜನರ ಜೀವನ ಶೈಲಿ ಕುರಿತೂ ಹೇಳುತ್ತವೆ. ಹೀಗೆ, ಒಪ್ಪವಾಗಿ ಜೋಡಿಸಿಟ್ಟಿರುವ ಗೊಂಬೆಗಳು ಒಂದಕ್ಕಿಂತ ಅಂದ, ಚೆಂದವಾಗಿವೆ.
ಈ ರೀತಿ ಗೊಂಬೆ ಕೂರಿಸುವುದು ಈ ಒಂದು ಕುಟುಂಬದಲ್ಲಷ್ಟೇ ಅಲ್ಲ. ಪಟ್ಟಣದಲ್ಲಿ ಹಲವು ಮನೆಗಳಲ್ಲಿ ಒಂದೊಂದು ರೀತಿ ಗೊಂಬೆಗಳ ಲೋಕ ತೆರೆದಿವೆ. ಎದ್ದು ಕಾಣುವ ವಿಜೃಂಭಣೆ ಇಲ್ಲಿಲ್ಲ ನಿಜ. ಆದರೆ, ಸಂಪ್ರದಾಯದ ನೆರಳಲ್ಲಿ ಭರವಸೆಯ ಕಿರಣವಿದೆ.