ಚಿಕ್ಕಮಗಳೂರು: ಪಕ್ಷ ಸೂಚಿಸಿದ ಕಡೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಚಿಕ್ಕಮಗಳೂರಿನಲ್ಲಿ ನನಗೆ ರಾಜಕೀಯ ಭವಿಷ್ಯ ದೊರೆತಿದೆ. ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ನಾನೇ ಆಯ್ದುಕೊಳ್ಳುವುದಾದರೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರವನ್ನೇ ಆಯ್ಕೆ ಮಾಡುತ್ತೇನೆ’ ಎಂದರು.
‘ಹಾಸನ, ಮಂಡ್ಯ, ಬೇಲೂರಿನಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಪಕ್ಷದ ತೀರ್ಮಾನವೇ ಅಂತಿಮವಾಗಿದೆ. ಈವರೆಗೆ ಯಾವುದೇ ಸೂಚನೆ ಬಂದಿಲ್ಲ’ ಎಂದರು.
‘ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ದಾರ್ಥ ಅವರು ನನಗೆ ಪರಿಚಿತರು. ಆದಾಯ ತೆರಿಗೆ ಅಧಿಕಾರಿಗಳ ದಾಳಿಯಿಂದ ಅವರು ಗಾಬರಿಯಾಗಿರುವುದಿಲ್ಲ. ಅವರ ವ್ಯವಹಾರಗಳು ಪಾರದರ್ಶಕವಾಗಿರುತ್ತವೆ ಎಂಬ ವಿಶ್ವಾಸ ಇದೆ’ ಎಂದು ಉತ್ತರಿಸಿದರು.