ಬ್ರಹ್ಮಾವರ: ‘ಯುವಜನತೆ ಸರ್ಕಾರಿ, ಖಾಸಗಿ ಕೆಲಸಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡದೇ, ಲಭ್ಯವಿರುವ ಜಮೀನಿನಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಕೊಂಡು ಹೆಚ್ಚಿನ ಲಾಭ ಪಡೆಯಿರಿ’ ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ನ ಕೃಷಿ ಸಲಹೆಗಾರ ಎಚ್.ಅನಂತ ಪ್ರಭು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬ್ರಹ್ಮಾವರದ ನಿರ್ಮಲಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕೃಷಿ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕೃಷಿಯ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಕೃಷಿ ಪ್ರಗತಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಮುಂದುವರಿದ ದೇಶಗಳು ಕೂಡ ಕೃಷಿಯಿಂದಲೇ ತಮ್ಮ ಪ್ರಗತಿಯನ್ನು ಸಾಧಿಸಿವೆ ಎಂದ ಅವರು ಎಲ್ಲ ರಂಗಗಳಿಗಿಂತ ಕೃಷಿ ರಂಗ ಮಾತ್ರ ಆತ್ಮ ಶಾಂತಿ ಮತ್ತು ಆತ್ಮ ಸಂತೋಷ ನೀಡುತ್ತದೆ. ವಿದ್ಯಾರ್ಥಿಗಳು ಮುಂದಿನ ಜೀವನಕ್ಕೆ ಇಂದೇ ಅಡಿಪಾಯ ಹಾಕಿಕೊಳ್ಳಬೇಕು. ಕೃಷಿ ಜೀವನ ಆಯ್ಕೆ ಮಾಡಿಕೊಂಡರೆ ಸಂತಸದಾಯಕ ಬದುಕನ್ನು ಕೊಂಡುಕೊಳ್ಳಬಹುದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಜೆಸಿಂತಾ ಕಾರ್ಡೋಜಾ ಅಧ್ಯಕ್ಷತೆ ವಹಿಸಿದ್ದರು. ಹೊನ್ನಿನಿಂದ ಮಣ್ಣನ್ನು ಪಡೆಯಲು ಸಾಧ್ಯವಿಲ್ಲ. ಮಣ್ಣನ್ನು ರಕ್ಷಣೆ ಮಾಡಬೇಕಾದರೆ ಕೃಷಿಯ ಕಡೆಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿಕೊಳ್ಳಬೇಕು. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಅಲ್ತಾರು ನಾಗರಾಜ್, ವಿದ್ಯಾರ್ಥಿ ಕೃಷಿ ಸಂಘದ ಶಿಕ್ಷಕ ಸಂಯೋಜಕ ಪ್ರಭಾಕರ್ ಶಾನುಭೋಗ, ಶಿಕ್ಷಕಿಯರಾದ ಟೀನಾ ಲಸ್ರಾದೊ. ಡೊಲ್ವಿನ್ ಡಾಯಸ್, ಪ್ರತಿಮಾ ಉಪಸ್ಥಿತರಿದ್ದರು.