ಆಲಮಟ್ಟಿ (ವಿಜಯಪುರ): ಗುಡ್ಡ ಕುಸಿತದಿಂದಾಗಿ ಭಾನುವಾರ ಮಧ್ಯಾಹ್ನ ಇಲ್ಲಿ ಸಂಭವಿಸಬಹುದಾಗಿದ್ದ ರೈಲು ಅವಘಡವೊಂದು ಟ್ರ್ಯಾಕ್ಮನ್ ಸಮಯಪ್ರಜ್ಞೆಯಿಂದ ತಪ್ಪಿದೆ.
ಇಲ್ಲಿನ ಜವಾಹರ ನವೋದಯ ಶಾಲೆಯ ಹಿಂಭಾಗದ ಗುಡ್ಡದ ಬಳಿ ಗದಗ–ಹುಟಗಿ ದ್ವಿಪಥ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಗುಡ್ಡವನ್ನು ಅಗೆಯಲಾಗುತ್ತಿದ್ದು ಈ ವೇಳೆ ಗುಡ್ಡ ಏಕಾಏಕಿ ಕುಸಿದಿದೆ.
ಇದೇ ಸಮಯಕ್ಕೆ, ತುಸು ದೂರದಲ್ಲಿಯೇ ವಿಜಯಪುರ–ಹುಬ್ಬಳ್ಳಿ (06920) ರೈಲು ಬರುತ್ತಿತ್ತು. ಇದನ್ನು ಗಮನಿಸಿದ ಟ್ರ್ಯಾಕ್ಮನ್ ಮಂಜುನಾಥ ಗುಣ್ಣನವರ ತಕ್ಷಣವೇ ಕೆಂಪು ಬಾವುಟ ಹಿಡಿದು ರೈಲಿನತ್ತ ಓಡಿದ್ದಾರೆ. ತಿರುವಿನಲ್ಲಿ ಬರುತ್ತಿದ್ದ ರೈಲಿನ ಚಾಲಕ ಬಾವುಟವನ್ನು ಗಮನಿಸಿ ರೈಲನ್ನು ನಿಲ್ಲಿಸಿದ್ದಾರೆ.
ನಂತರ ಹಳಿಯ ಮೇಲೆ ಬಿದ್ದಿದ್ದ ಮಣ್ಣನ್ನು ದ್ವಿಪಥ ಹಳಿ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರಿಂದ ತೆರವುಗೊಳಿಸಲಾಯಿತು. ಸಂಜೆ 5ರಿಂದ ರೈಲು ಸಂಚಾರ ಪುನರಾರಂಭಗೊಂಡಿತು ಎಂದು ಆಲಮಟ್ಟಿ ರೈಲ್ವೆ ನಿಲ್ದಾಣದ ಮೂಲಗಳು ತಿಳಿಸಿವೆ.