ಮಂಗಳೂರು: ‘ಆರ್ಎಸ್ಎಸ್ ನನ್ನನ್ನು ಮಟ್ಟಹಾಕುವ ಪ್ರಯತ್ನ ಆರಂಭಿಸಿದೆ. ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ಆರ್ಎಸ್ಎಸ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ’ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.
ಇಲ್ಲಿನ ಸೇಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ) ವತಿಯಿಂದ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಸಂಬಂಧಿಸಿದ ವಿಚಾರ ಸಂಕಿರಣ ಉದ್ಘಾಟಿಸಿ, ಮಾತನಾಡುವ ವೇಳೆ ಅವರು ಈ ವಿಷಯ ತಿಳಿಸಿದರು.
‘ಕಾರ್ಕಳದಲ್ಲಿ ಇತ್ತೀಚೆಗೆ ಆರ್ಎಸ್ಎಸ್ ಪ್ರಮುಖರ ಸಭೆ ನಡೆದಿದೆ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೂಡ ಆ ಸಭೆಯಲ್ಲಿದ್ದರು. ಮಟ್ಟುವನ್ನು ಮಟ್ಟ ಹಾಕಲೇಬೇಕು ಎಂಬುದಾಗಿ ಆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಗುಪ್ತಚರ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದರು.
‘ಮೊನ್ನೆ ಗೌರಿ ಲಂಕೇಶ್ ಅವರಿಗೆ ಬಿದ್ದ ಗುಂಡು ನಾಳೆ ನನಗೂ ಬೀಳಬಹುದು. ಸಾವಿಗೆ ನಾನು ಹೆದರುವುದಿಲ್ಲ. ಆದರೆ, ನಾವು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಅವುಗಳನ್ನು ಮಾಡಲಾಗದೇ ಅತೃಪ್ತ ಆತ್ಮಗಳಾಗಿ ಸಾಯಬಾರದು’ ಎಂದು ಹೇಳಿದರು.