ಬೆಂಗಳೂರು: ಹೆಣ್ಣೂರು ಸಮೀಪದ ವಡ್ಡರಪಾಳ್ಯದಲ್ಲಿ ಶನಿವಾರ ರಾತ್ರಿ ನೈಜೀರಿಯಾ ವಿದ್ಯಾರ್ಥಿಗಳ ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಅದೇ ವೇಳೆ ಕಾರಿಗೆ ಬೆಂಕಿ ಹಚ್ಚಲಾಗಿದೆ.
ಕಾರಿನ ಮಾಲೀಕ ನೈಜೀರಿಯಾದ ಎಲ್ವಿನ್ ಎಂಬುವರು ಘಟನೆ ಸಂಬಂಧ ಹೆಣ್ಣೂರು ಠಾಣೆಗೆ ದೂರು ನೀಡಿದ್ದಾರೆ. ಎದುರಾಳಿ ಗುಂಪಿನ ವಿದ್ಯಾರ್ಥಿಗಳು ಸಹ ಪ್ರತಿದೂರು ದಾಖಲಿಸಿದ್ದಾರೆ.
‘ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಜಗಳವಾಗಿತ್ತು. ಬಿಯರ್ ಬಾಟಲಿಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದರು. ಆ ವೇಳೆ ತೀವ್ರ ಗಾಯಗೊಂಡಿದ್ದ ಚಿಗೋಚಿ ಎಂಬುವರು ಮೃತಪಟ್ಟಿದ್ದರು.ಕೊಲೆ ಆರೋಪದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.’
‘ಅದೇ ದ್ವೇಷದಿಂದಾಗಿ ಚಿಗೋಚಿ ಅವರ ಸ್ನೇಹಿತರು, ಎಲ್ವಿನ್ ಮನೆಗೆ ಶನಿವಾರ ರಾತ್ರಿ ಹೋಗಿ ಜಗಳ ತೆಗೆದಿದ್ದರು. ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕೆಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.