ಲಾಹೋರ್: ಮುಂಬೈ ದಾಳಿಯ ಸಂಚುಕೋರ ಹಫೀಸ್ ಸಯೀದ್ ಗೃಹ ಬಂಧನವನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಆತನ ಚಟುವಟಿಕೆಗಳು ಶಾಂತಿಯುತ ವಾತಾವರಣಕ್ಕೆ ಬೆದರಿಕೆ ಒಡ್ಡುವಂತಿವೆ ಎಂದು ಪಂಜಾಬ್ ಪ್ರಾಂತ್ಯದ ಅಧಿಕಾರಿಗಳು ಹೇಳಿದ್ದಾರೆ.
ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥನಾದ ಸಯೀದ್ನನ್ನು ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ. ಸಯೀದ್ ಹಾಗೂ ಆತನ ನಾಲ್ವರು ಸಹಚರರಿಗೂ ಗೃಹಬಂಧನವನ್ನು ವಿಸ್ತರಿಸಿ ಪಂಜಾಬ್ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಜಮಾತ್ ಹಾಗೂ ಫಲಾಹ್ ಎ ಇನ್ಸಾನಿಯತ್ ಸಂಘಟನೆಗಳು ಸಯೀದ್ ನಾಯಕತ್ವದಲ್ಲಿ ದೇಶದಲ್ಲಿ ಅವ್ಯವಸ್ಥೆ ಉಂಟು ಮಾಡಲು ಸಂಚು ರೂಪಿಸಿದ್ದು, ಆತನನ್ನು ನಾಯಕನಂತೆ ಬಿಂಬಿಸಲಾಗುತ್ತಿದೆ ಎಂದು ಗೃಹ ಇಲಾಖೆ ಹೇಳಿದೆ.