ಕೊಳ್ಳೇಗಾಲ: ತಾಲ್ಲೂಕಿನಾದ್ಯಂತ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಲ್ಲಿ ಜೀವಕಳೆ ಮೈದುಂಬಿದೆ.
ಶಿವನಸಮುದ್ರ ಬಳಿಯ ಪ್ರವಾಸಿಗರನ್ನು ಸೆಳೆಯುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು, ಕಾವೇರಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮೈದುಂಬಿ ಹರಿಯತೊಡಗಿವೆ. ಈ ನಯನ ಮನೋಹರ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಶುಕ್ರವಾರದಿಂದ ನಿರಂತರವಾಗಿ ನಾಲ್ಕುದಿನ ರಜೆ ಇರುವುದರಿಂದ ಧುಮ್ಮಿಕ್ಕುತ್ತಿರುವ ಜಲಪಾತ ವೀಕ್ಷಣೆಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಲ್ಲಿ ಇಲ್ಲಿನ ವ್ಯಾಪಾರಸ್ಥರು ಸಜ್ಜುಗೊಳ್ಳುತ್ತಿದ್ದಾರೆ.
ಬೆಂಗಳೂರು, ಮಂಡ್ಯ, ಕನಕಪುರ, ಮೈಸೂರು ಸೇರಿದಂತೆ ಇತರೆ ರಾಜ್ಯ ಹೊರ ರಾಜ್ಯಗಳಿಂದಲೂ ಜಲಪಾತ ವೀಕ್ಷಣೆಗೆ ಜನಸಾಗರ ಹರಿದು ಬರುವ ಸಾಧ್ಯತೆಯಿದ್ದು, ಯಾವುದೇ ಅವಘಡ ಸಂಭವಿಸಿದಂತೆ ಮುಂಜಾಗರೂಕತಾ ಕ್ರಮವಾಗಿ ಬಿಗಿ ಭದ್ರತೆಗೆ ಕ್ರಮವಹಿಸಲು ಇಲ್ಲಿನ ಪೊಲೀಸರು ಮುಂದಾಗಿದ್ದಾರೆ.