ಮೈಸೂರು: ವಿಶ್ವವಿಖ್ಯಾತ ದಸರಾ ಮೆರವಣಿಗೆ ಆರಂಭವಾಗಿದ್ದು, ಅರಮನೆಗಳ ನಗರಿಯಲ್ಲಿ ಎಲ್ಲೆಲ್ಲೂ ಜನಸಾಗರ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 2.15ಕ್ಕೆ ಅರಮನೆ ಬಲರಾಮ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡುತ್ತಿವೆ. ಸುಮಾರು 2,000 ಕಲಾವಿದರು ಪಾಲ್ಗೊಂಡಿದ್ದಾರೆ. ರಾಜಪಥದ ಇಕ್ಕೆಲಗಳಲ್ಲಿ ಸೇರಿಸುವ ಪ್ರೇಕ್ಷಕರು ಕಲಾ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಬೆಳಿಗ್ಗೆ ಅರಮನೆ ಕರಿಕಲ್ಲುತೊಟ್ಟಿಯಲ್ಲಿ ನಡೆದ ವಜ್ರಮುಷ್ಟಿ ಕಾಳಗ ಮನಸೂರೆಗೊಂಡಿತು. ನಾಲ್ವರು ಜಟ್ಟಿಗಳ ಎರಡು ಜೋಡಿಗಳು ಏಕಕಾಲದಲ್ಲಿ ಪೈಪೋಟಿ ನಡೆಸಿದವು. ಮೈಸೂರು, ಚಾಮರಾಜನಗರ, ಚನ್ನಪಟ್ಟಣ ಹಾಗೂ ಬೆಂಗಳೂರಿನ ಜಟ್ಟಿಗಳು ಪಾಲ್ಗೊಂಡಿದ್ದರು.