ಚಾವಟಿ ಪ್ರಶ್ನೆಗೆ ಚೂಟಿ ಉತ್ತರ
ಲಂಡನ್, ಅ. 5– ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಜಾರ್ಜ್ಬ್ರೌನ್ ಅವರು ನಿನ್ನೆ ರಾತ್ರಿ ಅವರ ವೈಯಕ್ತಿಕ ವರ್ತನೆಯ ಟೀಕಾಕಾರರಿಗೆ ಸ್ಪಷ್ಟವಾಗಿ ಹೀಗೆ ತಿಳಿಸಿದರು: ‘ನಾನಿರುವ ಹಾಗೆಯೇ ನನ್ನನ್ನು ಅಧಿಕಾರದಲ್ಲಿ ಹೊಂದಿರಲು ರಾಷ್ಟ್ರಕ್ಕೆ ಇಷ್ಟವಿದೆಯೋ, ಇಲ್ಲವೋ ಎಂಬುದನ್ನು ಈಗ ತೀರ್ಮಾನಿಸಬೇಕು. ಏಕೆಂದರೆ ನಾನು ಬದಲಾಯಿಸುವ ಸಂಭವ ಲೇಶವಾದರೂ ಇಲ್ಲ.’
ಇನ್ನೂ ಹೇಳಿದರು: ‘ತಪ್ಪನ್ನೇ ಮಾಡದಿರುವ ವಿದೇಶಾಂಗ ಕಾರ್ಯದರ್ಶಿ ನಿಮಗೆ ಬೇಕಾಗಿದ್ದರೆ, ನಾನಂತೂ ಸರಿಯಾದ ವ್ಯಕ್ತಿಯಲ್ಲ. ಆದರೆ ಇನ್ನೂ
ಒಂದು ಮಾತು. ನೀವು ಬೇರೆ ಯಾರನ್ನೇ ವಿದೇಶಾಂಗ ಕಾರ್ಯದರ್ಶಿಯಾಗಿ ಕರೆತಂದರೂ ಅವನೂ ತುಂಬಾ ಒಳ್ಳೆಯ ಕಾರ್ಯದರ್ಶಿ ಆಗಲಾರ.
ಮಹಾಜನ್ ವರದಿಗೆ ಕೇರಳ ಎಳ್ಳಷ್ಟೂ ಬದ್ಧವಲ್ಲ: ಎಸ್.ಎಸ್.ಪಿ. ಸ್ಪಷ್ಟನೆ
ಎರ್ನಾಕುಲಂ, ಅ. 5– ಮಹಾಜನ ಆಯೋಗದ ವರದಿಯನ್ನು ಸಂಬಂಧ ಪಟ್ಟ ಪಕ್ಷಗಳೆಲ್ಲಾ ಒಪ್ಪಿಕೊಳ್ಳಬೇಕೆಂದು ಮೈಸೂರಿನ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಏಕೆ ಮನವಿ ಮಾಡಿಕೊಳ್ಳುತ್ತಿರುವರೋ ಅದು ತಮಗೆ ಅರ್ಥವಾಗುತ್ತಿಲ್ಲವೆಂದು ಕೇರಳ ಎಸ್.ಎಸ್.ಪಿ. ಪಕ್ಷದ ಅಧ್ಯಕ್ಷ ಹಾಗೂ ಪಾರ್ಲಿಮೆಂಟ್ ಸದಸ್ಯ ಶ್ರೀ ಕೆ. ಚಂದ್ರಶೇಖರನ್ ಅವರು ಇಂದು ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮೈಸೂರು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಹಾಜನ್ ಆಯೋಗದ ಶಿಫಾರಸಿನ ಪ್ರತಿಗಳನ್ನು ನೀಡಲಾಗಿದೆಯಾದರೂ, ಕೇಂದ್ರ ಸರಕಾರವು ಈ ವರದಿಯನ್ನು ಇನ್ನೂ ಪ್ರಕಟಿಸಿಲ್ಲವೆಂದು ಶ್ರೀ ಚಂದ್ರಶೇಖರನ್ ಹೇಳಿದ್ದಾರೆ.
ದಸರಾಕ್ಕೆ ಸುಖಾಗಮನ
ಬೆಂಗಳೂರು, ಅ. 5– ಪ್ರವಾಸಿ ವಾರಾಚರಣೆಯ ಅಂಗವಾಗಿ ದಸರಾ ಸಮಾರಂಭಕ್ಕೆ ಸುಸ್ವಾಗತ ಬಯಸುವ ಬೃಹತ್ ಆಕಾರದ WELCOME ನಾಮ ಫಲಕವು ಶ್ರೀ ಚಾಮುಂಡಿಬೆಟ್ಟವನ್ನು ಅಲಂಕರಿಸಿದೆ. ದಸರಾ ಇತಿಹಾಸದಲ್ಲೆ ಮೊಟ್ಟಮೊದಲಸಲ ಈ ನಾಮಫಲಕವನ್ನು ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಬೆಟ್ಟದ ಮೇಲೆ ಸ್ಥಾಪಿಸಿದೆ.
ಡಾ.ಲೋಹಿಯ ಸ್ಥಿತಿ ಚಿಂತಾಜನಕ
ನವದೆಹಲಿ, ಅ. 5– ಸೋಷಲಿಸ್ಟ್ ನಾಯಕ ಡಾ. ರಾಮಮನೋಹರ ಲೋಹಿಯ ಅವರ ದೇಹಸ್ಥಿತಿ ಇಂದು ರಾತ್ರಿ ‘ಚಿಂತಾಜನಕ’ವಾಗಿದೆ
ಯೆಂದು ಹೇಳಲಾಗಿದೆ. ವೈದ್ಯರ ತಂಡವು ಇಂದು ರಾತ್ರಿ ಅವರ ದೇಹಸ್ಥಿತಿಯನ್ನು ಪರೀಕ್ಷಿಸಿತಲ್ಲದೆ ಅವರ ದೇಹದ ಉಷ್ಣಾಂಶ 102 ಡಿಗ್ರಿಗೆ ಹೆಚ್ಚಿದುದು ಗೊತ್ತಾಯಿತು. ಇದಕ್ಕೆ ಮುನ್ನ ಅವರ ದೇಹದ ಉಷ್ಣಾಂಶವು ಮಾಮೂಲಿಗೆ ಬಂದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.