ಜಲ ವಿವಾದ: ಕೇಂದ್ರದ ಕ್ರಮಕ್ಕಾಗಿ 1 ತಿಂಗಳು ಕಾಯಲು ಸಿದ್ಧ- ಮುಖ್ಯಮಂತ್ರಿ ಸ್ಪಷ್ಟನೆ
ಬೆಂಗಳೂರು, ಅ. 8– ಕೃಷ್ಣಾ–ಗೋದಾವರಿ ನೀರು ಹಂಚಿಕೆಯ ವಿವಾದವನ್ನು ಪಂಚಾಯಿತಿಗೆ ಒಪ್ಪಿಸಬೇಕೆಂದು ಕೇಂದ್ರವನ್ನು ಒತ್ತಾಯ ಮಾಡಿರುವ ರಾಜ್ಯ ಸರಕಾರ ‘ಇನ್ನೊಂದು ತಿಂಗಳಲ್ಲಿ ಕೇಂದ್ರ ಏನು ಮಾಡುವುದು?’ ಎಂಬುದನ್ನು ಕಾದು ನೋಡಲಿದೆ.
ಈ ವಿವಾದದ ಬಗ್ಗೆ ದೆಹಲಿಯಲ್ಲಿ ನಡೆದ ಮೈಸೂರು, ಮಹಾರಾಷ್ಟ್ರ ಹಾಗೂ ಆಂಧ್ರದ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿ ಇಂದು ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಈ ವಿಷಯವನ್ನು ವರದಿಗಾರರಿಗೆ ತಿಳಿಸಿದರು.
* ಲಾರ್ಡ್ ಅಟ್ಲಿ ನಿಧನ ಲಂಡನ್, ಅ. 8– ಬ್ರಿಟನ್ನಿನ ಮಾಜಿ ಪ್ರಧಾನ ಮಂತ್ರಿ ಲಾರ್ಡ್ ಅಟ್ಲಿ ಅವರು ಇಂದು ಬೆಳಿಗ್ಗೆ 6.10ಕ್ಕೆ ಸ್ಥಳೀಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅಟ್ಲಿ ಅವರು ಶಾಂತವಾಗಿ ನಿದ್ರಿಸುತ್ತಿದ್ದಾಗಲೇ ಮೃತರಾದರೆಂದೂ ಅವರ ಒಬ್ಬನೇ ಮಗ ಅವರ ಬಳಿ ಇದ್ದರೆಂದೂ ಆಸ್ಪತ್ರೆ ಬುಲೆಟಿನ್ ತಿಳಿಸಿದೆ.
* ಪಂಚಾಯ್ತಿಗೆ ಪ್ರಧಾನಿ ವಿರೋಧ? ಹೈದರಾಬಾದ್, ಅ. 8– ಕೃಷ್ಣಾ ನದಿ ನೀರಿನ ಹಂಚಿಕೆ ವಿವಾದವನ್ನು ಪಂಚಾಯ್ತಿಗೊಪ್ಪಿಸುವುದನ್ನು ಪ್ರಧಾನಮಂತ್ರಿ ತಳ್ಳಿಹಾಕಿದ್ದಾರೆಂದು, ಆಂಧ್ರ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದರೆಡ್ಡಿ ಅವರು ಇಂದು ಇಲ್ಲಿ ಹೇಳಿದರು.
ಎಷ್ಟು ನೀರು ಒದಗುವುದೆಂದು ಹೊಸದಾಗಿ ವೈಜ್ಞಾನಿಕ ರೀತಿಯಲ್ಲಿ ಗೊತ್ತು ಮಾಡುವವರೆಗೂ ಯಥಾಸ್ಥಿತಿಯಲ್ಲಿಯೇ ಮುಂದುವರೆಯುವುದೆಂದು ಅವರು ಹೇಳಿದರು.
ಕೃಷ್ಣಾ ನದಿಗೆ ಸಂಬಂಧಿಸಿದಂತೆ ಈಗಾಗಲೇ ಕೈಗೊಂಡಿರುವ ಯೋಜನೆಗಳ ಕಾರ್ಯಕ್ಕೆ ಏನೂ ಧಕ್ಕೆಯಾಗದೆಂದೂ, ಇದು ನಾಗಾರ್ಜುನ ಸಾಗರ
ಯೋಜನೆಗೂ ಅನ್ವಯಿಸುವುದೆಂದೂ ಅವರು ದೆಹಲಿಯಿಂದ ಹಿಂತಿರುಗಿದೊಡನೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.