ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಬ್ಯಾಂಕಿಂಗ್‌ ರಕ್ಷಣೆ ಹೇಗೆ?

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಳೆದ ನವೆಂಬರ್‌ನಲ್ಲಿ ನಡೆದ ನೋಟು ರದ್ದತಿ ಕ್ರಮದ ನಂತರ ದೇಶದಲ್ಲಿ ‘ಡಿಜಿಟಲ್‌ ಬ್ಯಾಂಕಿಂಗ್‌’ ಒಮ್ಮೆಲೇ ಮುನ್ನೆಲೆಗೆ ಬಂದಿದೆ. ಇದು ಭಾರತದ ಜನಸಾಮಾನ್ಯರು ಮತ್ತು ವರ್ತಕರು ಪಾವತಿ ಮಾಡುವ ಅಥವಾ ವಹಿವಾಟು ನಡೆಸುವ ವಿಧಾನವನ್ನೇ ಬದಲಿಸಿದೆ. ನೋಟು ರದ್ದತಿಯ ಬಳಿಕ ದೇಶದಲ್ಲಿ ನಡೆಯುತ್ತಿದ್ದ ಡಿಜಿಟಲ್ ವಹಿವಾಟುಗಳ ಪ್ರಮಾಣ ಶೇ 50ರಷ್ಟು ಏರಿಕೆಯಾಗಿ, ನಗದು ಬಳಕೆಯ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿದೆ. 2017–18ನೇ ವರ್ಷಾಂತ್ಯದೊಳಗೆ ದೇಶದ ಒಟ್ಟು ಡಿಜಿಟಲ್‌ ವಹಿವಾಟುಗಳ ಸಂಖ್ಯೆಯನ್ನು ಕನಿಷ್ಠ 1.5ಲಕ್ಷ ಕೋಟಿಗೆ ಏರಿಸಬೇಕೆಂಬ ಸರ್ಕಾರದ ನಿರೀಕ್ಷೆಗೆ ಅನುಗುಣವಾಗಿಯೇ ಈ ಬೆಳವಣಿಗೆ ಇದೆ.

ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಮೊಬೈಲ್‌ ಫೋನ್‌ ಮತ್ತು ಆ್ಯಪ್‌ ನಡುವೆ ದ್ವಿಮುಖ ಸಂವಹನ ಇರುವ ವ್ಯವಸ್ಥೆ, ಇ–ವಾಲೆಟ್‌ನಂಥ ಪೂರ್ವಪಾವತಿ ಆ್ಯಪ್‌ಗಳು (ಪಿಪಿಐ), ಇಂಟರ್‌ನೆಟ್‌ ಅಥವಾ ಆನ್‌ಲೈನ್‌ ಬ್ಯಾಂಕಿಂಗ್‌, ಎರಡು ಬ್ಯಾಂಕ್‌ಗಳ ನಡುವೆ ಸಂಪರ್ಕ ಕಲ್ಪಿಸುವ ‘ಭೀಮ್‌’ಆ್ಯಪ್‌... ಹೀಗೆ ಡಿಜಿಟಲ್‌ ಬ್ಯಾಂಕಿಂಗ್‌ಗೆ ಹಲವು ರೂಪಗಳಿವೆ.

ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಸಹಯೋಗದಲ್ಲಿ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಕೈಗೊಂಡಿರುವ ಯೋಜನೆಗಳ ಪರಿಣಾಮವಾಗಿ ಡಿಜಿಟಲ್‌ ಹಾಗೂ ಇಂಟರ್‌ನೆಟ್‌ ಬ್ಯಾಂಕಿಂಗ್‌ ಈಗ ಜನಪ್ರಿಯವಾಗುತ್ತಿದೆ.

ಸರ್ಕಾರ ಮತ್ತು ಬ್ಯಾಂಕ್‌ಗಳ ಯೋಜನೆಗೆ ಆರ್ಥಿಕ ತಂತ್ರಜ್ಞಾನ ಸಂಸ್ಥೆಗಳೂ (ಫಿನ್‌ ಟೆಕ್‌) ನೆರವಾಗಿವೆ. ಈ ಆರ್ಥಿಕ ಒಳಗೊಳ್ಳುವಿಕೆಗಾಗಿ ಅನೇಕ ಉಪಕ್ರಮಗಳನ್ನೂ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಸುರಕ್ಷಿತವಾದ ವ್ಯವಸ್ಥೆ ಕಲ್ಪಿಸುವುದು ಹಾಗೂ ಶ್ರೇಷ್ಠ ಗುಣಮಟ್ಟದ ಸೇವೆಗಳನ್ನು ನೀಡುವುದು ಬ್ಯಾಂಕ್‌ಗಳ ಉದ್ದೇಶ.

ಹಲವು ಉಪಯೋಗಗಳು: ದೇಶದ ಸಣ್ಣ ಹಾಗೂ ಮಧ್ಯಮ ಗಾತ್ರದ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶದ ಜನರೂ ಸಹ ಈಗ ಬ್ಯಾಂಕಿಂಗ್‌ ಹಾಗೂ ಹಣಕಾಸು ವ್ಯವಸ್ಥೆಯೊಳಗೆ ಬಂದಿದ್ದಾರೆ. ಸ್ವಾತಂತ್ರ್ಯಾನಂತರ ಇದೇ ಮೊದಲಬಾರಿಗೆ ಹಣಕಾಸು ಸೇವೆಗಳು ಈ ಪ್ರಮಾಣದಲ್ಲಿ ವಿಸ್ತರಣೆ ಸಾಧಿಸಿವೆ. ಇದರ ಪರಿಣಾಮವಾಗಿ ಆಧಾರ್‌ ಜೋಡಣೆ ಆಗಿರುವ ಸುಮಾರು 35 ಕೋಟಿಗೂ ಹೆಚ್ಚು ಖಾತೆಗಳಿಗೆ ನೇರವಾಗಿ ಸಬ್ಸಿಡಿ, ಹಾಗೂ ಇತರ ಸೌಲಭ್ಯಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಜನಧನ್‌– ಆಧಾರ್‌ – ಮೊಬೈಲ್‌ (JAM) ಜೋಡಣೆಯಿಂದ ಇದು ಸಾಧ್ಯವಾಗುತ್ತಿದೆ.

ಆದರೆ ಇದು ಡಿಜಿಟಲ್‌ ಬ್ಯಾಂಕಿಂಗ್‌ನ ಒಂದು ಮುಖ ಮಾತ್ರ. ಸಾಂಪ್ರದಾಯಿಕ ವ್ಯವಸ್ಥೆಯಿಂದ ಡಿಜಿಟಲ್‌ ಯುಗಕ್ಕೆ ಬದಲಾಗುವ ಈ ಸಂದರ್ಭದಲ್ಲಿ ಅನೇಕ ಸವಾಲುಗಳೂ ಎದುರಾಗಿವೆ. ಮಾಹಿತಿ ಕಳ್ಳತನ, ಗ್ರಾಹಕರ ಅಮೂಲ್ಯ ಮಾಹಿತಿಗಳ ಕಳ್ಳತನ ಮಾಡುವ ಕುತಂತ್ರಾಂಶಗಳು, ಖಾತೆಗಳ ಮೇಲೆ ಸೈಬರ್‌ ದಾಳಿ ನಡೆಸಿ ಹಣಕ್ಕೆ ಬೇಡಿಕೆ ಇಡುವುದು... ಇವೆಲ್ಲವೂ ಡಿಜಿಟಲ್‌ ಯುಗದ ಸವಾಲುಗಳು.

ಗ್ರಾಹಕರಿಗೆ ಗರಿಷ್ಠ ರಕ್ಷಣೆ ನೀಡಲು ಬ್ಯಾಂಕ್‌ ಹಾಗೂ ಆರ್ಥಿಕ ತಂತ್ರಜ್ಞಾನ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಲೇ ಇವೆ. ಆದರೂ ಡಿಜಿಟಲ್‌ ವಹಿವಾಟಿನಲ್ಲಿ ಗ್ರಾಹಕರು ಎಂಥ ಮುನ್ನೆಚ್ಚರಿಕೆ ವಹಿಸಬೇಕು, ಏನು ಮಾಡಬೇಕು ಮತ್ತು ಏನೇನು ಮಾಡಬಾರದು ಎಂಬುದನ್ನು ಗ್ರಾಹಕರು ತಿಳಿದುಕೊಳ್ಳುವುದು ಅತ್ಯಗತ್ಯ. ಆ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಪಾಸ್‌ವರ್ಡ್‌ ಕಡ್ಡಾಯ
ಬ್ಯಾಂಕಿಂಗ್‌ ವಹಿವಾಟಿಗಾಗಿ ನೀವು ಬಳಸುವ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಬೇರೊಬ್ಬರ ಕೈಗೆ ಸುಲಭವಾಗಿ ಲಭಿಸದಂತೆ ಎಚ್ಚರವಹಿಸುವುದು ಅಗತ್ಯ. ಇದಕ್ಕೆ ಇನ್ನೊಂದು ಉಪಾಯವೆಂದರೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ಗೆ ಕಡ್ಡಾಯವಾಗಿ ಪಾಸ್‌ವರ್ಡ್‌ ಅಳವಡಿಸುವುದು.

ಆದರೆ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಪಾಸ್‌ವರ್ಡ್‌ ಬಳಕೆ ಬೇಡ. ಅಕ್ಷರ, ಚಿನ್ಹೆ, ಸಂಖ್ಯೆಗಳ ಮಿಶ್ರ ರೂಪದ ಪಾಸ್‌ವರ್ಡ್‌ ಗರಿಷ್ಠ ಸುರಕ್ಷತೆ ನೀಡಬಲ್ಲದು. ಹಾಗೆಂದು ಹೆಸರಿಗೆ ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಜೋಡಿಸಿ ಪಾಸ್‌ವರ್ಡ್‌ ರೂಪಿಸಿದರೆ ಅದನ್ನು ಯಾರು ಬೇಕಾದರೂ ಸುಲಭವಾಗಿ ಕಂಡುಕೊಳ್ಳಬಹುದು. ಹಾಗಾಗಿ ಆದಷ್ಟೂ ಬೇರೆಯವರಿಗೆ (ಆಪ್ತರಿಗೂ) ಗೊತ್ತಿರದ ಕ್ಲಿಷ್ಟ ಪಾಸ್‌ವರ್ಡ್ ಬಳಸಿ.

ಆನ್‌ಲೈನ್ ಬ್ಯಾಂಕಿಂಗ್‌ ಎಚ್ಚರಿಕೆ
ನಿಮ್ಮ ಖಾತೆಯ ವಿವರಗಳನ್ನು ನೋಡಲು ಬ್ಯಾಂಕ್‌ನ ಸುರಕ್ಷಿತ ವೆಬ್‌ಸೈಟ್‌ ಮೂಲಕವೇ ಲಾಗಿನ್‌ ಆಗಿ. ಮೇಲ್‌ ಮೂಲಕ ಬಂದ ಲಿಂಕ್‌ ಬಳಸಿ, ಇನ್ಯಾವುದೋ ವೆಬ್‌ಸೈಟ್‌ ಮುಖಾಂತರವಾಗಿ ಲಾಗಿನ್‌ ಆಗುವುದು ಅಪಾಯಕಾರಿ. ವಹಿವಾಟು ಪೂರ್ತಿಗೊಳಿಸಿದ ಕ್ಷಣದಲ್ಲೇ ಲಾಗ್‌ಆಫ್‌ ಆಗಲು ಮರೆಯಬೇಡಿ. ಲಾಗ್‌ ಆಫ್‌ ಮಾಡದೆಯೇ ಕಿಂಡಿಯನ್ನು ಮುಚ್ಚುವುದೂ ಸಹ ದುಬಾರಿ ಎನಿಸಬಹುದು.

ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಯಾವುದೋ ಖಾಸಗಿ ಸೈಬರ್‌ ಕೆಫೆಯಲ್ಲಿ ಲಭ್ಯವಾಗುವ ಉಚಿತ ವೈಫೈಗಳನ್ನು ಬಳಸಿ ಎಂದಿಗೂ ಬ್ಯಾಂಕಿಂಗ್‌ ವಹಿವಾಟು ನಡೆಸಬೇಡಿ.

ಅಧಿಕೃತ ಫೈರ್‌ವಾಲ್‌ ಬಳಸಿ
ಅಕೌಂಟ್‌ ಹ್ಯಾಕರ್‌ಗಳಿಂದ ನಿಮ್ಮ ಬ್ಯಾಂಕ್‌ ಖಾತೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಯಾವುದಾದರೂ ಸಂಸ್ಥೆಯ ಅಧಿಕೃತ ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಿ. ಕಂಪ್ಯೂಟರ್‌ ರಕ್ಷಣೆಗಾಗಿ ಸೂಕ್ತವಾದ ಫೈರ್‌ವಾಲ್‌ ಅನ್ನೂ ಆಯ್ದುಕೊಂಡಿರಿ. ನಿಮ್ಮ ಕುಟುಂಬದ ಸದಸ್ಯರೇ ಆಗಿದ್ದರೂ ಸರಿ, ಯಾರಿಗೂ– ಯಾವ ಕಾರಣಕ್ಕೂ ‘ರಿಮೋಟ್‌ ಆ್ಯಕ್ಸೆಸ್‌’ಮೂಲಕ ನಿಮ್ಮ ಕಂಪ್ಯೂಟರ್‌ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ಇಲ್ಲಿ ಕಂಪ್ಯೂಟರ್‌ ಹ್ಯಾಕಿಂಗ್‌ಗೆ ಅವಕಾಶ ಇರುತ್ತದೆ.

ಕಂಪ್ಯೂಟರ್‌ನ ಆಪರೇಟಿಂಗ್‌ ಸಿಸ್ಟಂಗೆ ಹೋಗಿ ‘ಫೈಲ್‌ ಅಂಡ್‌ ಪ್ರಿಂಟಿಂಗ್‌ ಷೇರಿಂಗ್‌’ ಕಮಾಂಡ್‌ ಅನ್ನು ಡಿಸೇಬಲ್‌ ಮಾಡಿರಿ. ನಿಮ್ಮ ಪಿ.ಸಿ. ಅಥವಾ ಲ್ಯಾಪ್‌ಟಾಪ್‌ ಅನ್ನು ಬಳಕೆ ಮಾಡುತ್ತಿಲ್ಲ ಎಂದಾದರೆ ಕಡ್ಡಾಯವಾಗಿ ಲಾಗ್‌ಆಫ್‌ ಮಾಡಿ. ಹಾಗೆಯೇ ಬಿಟ್ಟು ನೀವು ಬೇರೆಡೆಗೆ ಹೋದಾಗ ಬೇರೆಯವರು ಅದನ್ನು ಬಳಸಿ, ದಾಖಲೆ ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ.

ಮೊಬೈಲ್‌ ಆ್ಯಪ್ ಬಳಕೆದಾರರಿಗೆ
ಮೊಬೈಲ್‌ ಆ್ಯಪ್‌ಗಳ ಮೂಲಕ ವಹಿವಾಟು ನಡೆಸುವವರೂ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲೇಬೇಕು. ಮೊದಲನೆಯದಾಗಿ, ಯಾವ ಕಾರಣಕ್ಕೂ ಫೋನ್‌ನಲ್ಲಿ ಮೊಬೈಲ್‌ ಬ್ಯಾಂಕಿಂಗ್‌ನ ಲಾಗಿನ್‌ ಪಾಸ್‌ವರ್ಡ್‌ ಸೇವ್‌ ಮಾಡಬೇಡಿ. ಅದನ್ನು ನೆನಪಿಟ್ಟುಕೊಳ್ಳಿ ಅಥವಾ ಬೇರೆ ಎಲ್ಲಾದರೂ ಬರೆದಿಟ್ಟುಕೊಳ್ಳಿ.

ಬ್ಯಾಂಕಿಂಗ್‌ ಆ್ಯಪ್‌ ಲಾಗಿನ್‌ ಆದ ಬಳಿಕ ಫೋನ್‌ ಅನ್ನು ಎಲ್ಲಾದರೂ ಅನಾಥವಾಗಿ ಬಿಟ್ಟುಹೋಗಬೇಡಿ. ಇದು ಕಳ್ಳತನಕ್ಕೆ ಆಹ್ವಾನ ಕೊಟ್ಟಂತೆ. ಇನ್ನೊಬ್ಬರಿಗೆ ನಿಮ್ಮ ಫೋನ್‌ನ ಮಾಹಿತಿ ನೋಡಲು ಸಾಧ್ಯವಾಗದಂತೆ ಯಾವಾಗಲೂ ಅದನ್ನು ಲಾಕ್‌ ಮಾಡಿಟ್ಟುಕೊಳ್ಳಿ.

ಮೊಬೈಲ್‌ ಕಳೆದುಹೋದರೆ ಕೂಡಲೇ ನಿಮ್ಮ ಬ್ಯಾಂಕ್‌ಗೆ ಆ ಕುರಿತು ಮಾಹಿತಿ ಕೊಡಿ. ನಿಮ್ಮ ಬ್ಯಾಂಕಿಂಗ್‌ ಆ್ಯಪ್‌ನ ಹೊಸ ಆವೃತ್ತಿ ಬರುತ್ತಿದ್ದಂತೆ ನಿಮ್ಮ ಮೊಬೈಲ್‌ನಲ್ಲೂ ಅದನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಿ (ಅಪ್‌ಡೇಟ್‌ ಮಾಡಿಕೊಳ್ಳಿ). ಆದರೆ ಸುರಕ್ಷಿತವಲ್ಲದ ಮೂಲಗಳಿಂದ ಆ್ಯಪ್‌ ಡೌನ್‌ಲೋಡ್‌ ಮಾಡುವುದಾಗಲಿ, ಅಪ್‌ಡೇಟ್‌ ಮಾಡುವುದಾಗಲಿ ಅಪಾಯಕಾರಿ. ಬಳಕೆ ಆದ ಕೂಡಲೆ ಆ್ಯಪ್‌ನಿಂದ ಲಾಗ್‌ಆಫ್‌ ಆಗುವುದನ್ನು ಮರೆಯಬೇಡಿ. ನಿಮ್ಮ ಖಾತೆಯಲ್ಲಿರುವ ಹಣ ಹಾಗೂ ನಡೆಸಿದ ವಹಿವಾಟುಗಳು ಸರಿಯಾಗಿವೆಯೇ ಎಂಬುದನ್ನು ಆಗಾಗ ಪರೀಕ್ಷಿಸಿಕೊಳ್ಳಿ.

ಖಾತೆಯಲ್ಲಿ ಯಾವುದೇ ಶಂಕಾಸ್ಪದ ವಹಿವಾಟು ನಡೆದಿದೆ ಎಂದು ಅನ್ನಿಸಿದರೆ ಕೂಡಲೇ ಅಥವಾ ಗರಿಷ್ಠ ಮೂರು ಕೆಲಸದ ದಿನಗಳೊಳಗೆ ಬ್ಯಾಂಕ್‌ನ ಗಮನಕ್ಕೆ ತನ್ನಿ. ದೂರು ಕೊಡುವುದು ತಡವಾದರೆ ನಷ್ಟಕ್ಕೆ ನೀವೇ ಹೊಣೆಗಾರರಾಗುವ ಸಾಧ್ಯತೆ ಇರುತ್ತದೆ. ಅಗತ್ಯವೆನಿಸಿದರೆ ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ಗಳನ್ನೂ ಸಂಪರ್ಕಿಸಬಹುದು.

ಸಾಂಪ್ರದಾಯಿಕ ಬ್ಯಾಂಕಿಂಗ್‌ ದಿನಗಳು ಕೊನೆಗೊಂಡಿವೆ. ಬ್ಯಾಂಕ್‌ಗಳು ಈಗ ಡಿಜಿಟಲ್‌ ಯುಗದ ಆಳಕ್ಕೆ ಇಳಿಯುತ್ತಿವೆ. ದಿನದ 24ಗಂಟೆಯೂ ಗ್ರಾಹಕರಿಗೆ ಅತ್ಯತ್ತಮ ಮತ್ತು ತಾಂತ್ರಿಕವಾಗಿ ಸಾಕಷ್ಟು ಮುಂದುವರಿದ ಸೇವೆಗಳನ್ನು ನೀಡುತ್ತಿವೆ. ಇಂಥ ಸಂದರ್ಭದಲ್ಲಿ ಡಿಜಿಟಲ್‌ ಹಾಗೂ ನೆಟ್‌ ಬ್ಯಾಂಕಿಂಗ್‌ ವಂಚನೆಯಿಂದ ಪಾರಾಗಲು ಗ್ರಾಹಕರೂ ಒಂದಿಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಭಾರತ ಕಡಿಮೆ ನಗದು ಬಳಕೆಯ ಅರ್ಥವ್ಯವಸ್ಥೆಯತ್ತ ಮುನ್ನುಗ್ಗುತ್ತಿರುವಾಗ, ತಮ್ಮ ವಹಿವಾಟುಗಳು ಸುರಕ್ಷಿತವಾಗಿರುವಂತೆ ನೋಡಿಕೊಂಡು, ಡಿಜಿಟಲ್‌ ವ್ಯವಸ್ಥೆಯ ಸೌಲಭ್ಯಗಳನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ಗ್ರಾಹಕರಮೇಲೂ ಇದೆ.

ಆನಂದ್‌ ಅರಸ್‌ (ಬ್ಯಾಂಕಿಂಗ್‌ ಕೋಡ್ಸ್‌ ಅಂಡ್‌ ಸ್ಟಾಂಡರ್ಡ್ಸ್‌ ಬೋರ್ಡ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT