ಖಿನ್ನತೆ ಬಗ್ಗೆ ಮುಕ್ತವಾಗಿ ಮಾತನಾಡಿ ಪ್ರಶಂಸೆ ಗಳಿಸಿದ್ದ ನಟಿ ದೀಪಿಕಾ ಪಡುಕೋಣೆ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ, ಈ ಬಾರಿ ಅವರ ಜತೆಗೆ ಗೆಳೆಯ ರಣವೀರ್ ಸಿಂಗ್ ಕೂಡಾ ಇದ್ದಾರೆ.
‘ಪದ್ಮಾವತಿ’ಯಲ್ಲಿ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣವೀರ್ ಹಾಗೂ ಪದ್ಮಾವತಿಯಾಗಿ ದೀಪಿಕಾ ಪರಕಾಯ ಪ್ರವೇಶ ಪಡೆದವರಂತೆ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಪರಕಾಯ ಪ್ರವೇಶವೇ ಅವರಿಬ್ಬರ ಮನಸ್ಥಿತಿ ಏರುಪೇರಾಗಲು ಕಾರಣವಾಗಿದೆಯಂತೆ. ಸಿನಿಮಾ ಮುಗಿದರೂ ಆ ಪಾತ್ರಗಳ ವ್ಯಕ್ತಿತ್ವವನ್ನೇ ಹೊತ್ತು ತಿರುಗುತ್ತಿದ್ದ ಅವರಿಬ್ಬರ ಮನಸಿಗೆ ಈಗ ಮನೋವೈದ್ಯರು ಚಿಕಿತ್ಸೆಯ ಮುಲಾಮು ಹಚ್ಚುತ್ತಿದ್ದಾರೆ.
‘ಪದ್ಮಾವತಿ’ಯ ಚಿತ್ರೀಕರಣ ಹೆಚ್ಚುಕಡಿಮೆ ಒಂದು ವರ್ಷ ನಡೆದಿದೆ. ಅಷ್ಟು ದೀರ್ಘಕಾಲ ಪಾತ್ರದೊಳಗೆ ತಲ್ಲೀನಗೊಂಡು ಅಭಿನಯಿಸಿದ್ದರ ಫಲವಾಗಿ ರಣವೀರ್ ಸಿಂಗ್ ಅವರು ಖಿಲ್ಜಿಯಂತೆಯೇ ಆಗಿಬಿಟ್ಟಿದ್ದರಂತೆ. ಅದನ್ನು ಮನಗಂಡ ಸ್ನೇಹಿತರು ಮನೋವೈದ್ಯರಿಂದ ಚಿಕಿತ್ಸೆ ತೆಗೆದುಕೊಳ್ಳಲು ಸಲಹೆ ನೀಡಿದರು.
ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ರಣವೀರ್ ಸಿಂಗ್ ತಮ್ಮ ಅಪಾರ್ಟ್ಮೆಂಟ್ನೊಳಗೇ ಕೆಲ ದಿನಗಳ ಕಾಲ ಬಂಧಿಯಾಗಿದ್ದರಂತೆ. ಖಿಲ್ಜಿಯ ಹುಚ್ಚಾಟ, ಯದ್ಧೋನ್ಮಾದವನ್ನು ಮೈದುಂಬಿಕೊಂಡ ರಣವೀರ್, ಚಿತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಖಿಲ್ಜಿಯ ಹರಿತವಾದ ನೋಟ ಬಿಂಬಿಸುವ ಪೋಸ್ಟರ್ ಕೂಡಾ ರಣವೀರ್ ಶ್ರಮವನ್ನು ಸಾರ್ಥಕಗೊಳಿಸುವಂತೆ ಮೂಡಿಬಂದಿತ್ತು.
ಇನ್ನು ರಾಣಿ ಪದ್ಮಾವತಿ ಪಾತ್ರದಲ್ಲಿ ಗಂಭೀರವದನೆಯಾಗಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆಗೆ, ಚಿತ್ರದ ಅಂತಿಮ ದೃಶ್ಯವಂತೂ ತುಂಬಾ ಡಿಸ್ಟರ್ಬ್ ಮಾಡಿದೆಯಂತೆ.
ಇನ್ನೇನು ಖಿಲ್ಜಿ ರಜಪೂತರ ಕೋಟೆಯನ್ನು ಆವರಿಸಿ, ಪತಿ ರಾಜಾ ರಾವಲ್ ರತನ್ ಸಿಂಗ್ ಮೇಲೆ ಯುದ್ಧ ಮಾಡಲು ಬರುತ್ತಾನೆ ಎನ್ನುವ ಆ ಸಂದರ್ಭದಲ್ಲಿ ಹೆಂಗಸರೆಲ್ಲಾ ಅಗ್ನಿಕುಂಡದೊಳಗೆ ಜಿಗಿದು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗುವ ದೃಶ್ಯ ದೀಪಿಕಾಳಿಗೆ ಮತ್ತೆ ಖಿನ್ನತೆಯ ಘಳಿಗೆಗಳನ್ನು ನೆನಪುಮಾಡಿಕೊಟ್ಟಿತಂತೆ. ಮತ್ತೊಮ್ಮೆ ಅಂಥ ಖಿನ್ನತೆಗೆ ಜಾರದಿರಲು ದೀಪಿಕಾ ಮನೋವೈದ್ಯರ ಸಲಹೆ ಪಡೆಯುತ್ತಿದ್ದಾರಂತೆ.
ಅಂದಹಾಗೆ ‘ಪದ್ಮಾವತಿ’ ಇದೇ ಡಿ.1ರಂದು ತೆರೆ ಕಾಣಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.