ಬೆಂಗಳೂರು: ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಕ್ರೀಡಾನಿಲಯ ದು:ಸ್ಥಿತಿಯತ್ತ ಸಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕ್ರೀಡಾನಿಲಯದ ಸುತ್ತ ಕೊಳಚೆ ತುಂಬಿದೆ. ಹೀಗಾಗಿ ಕ್ರೀಡಾಪಟುಗಳು ಮೂಗು ಮುಚ್ಚಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕ್ರೀಡಾನಿಲಯದಲ್ಲಿ ಕಳಪೆ ಆಹಾರ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ತಿಂಗಳ ಹಿಂದೆ ಪ್ರತಿಭಟನೆ ನಡೆದಿತ್ತು. ಇದಕ್ಕೆ ಪರಿಹಾರ ಸಿಗುತ್ತಿದ್ದಂತೆ ಮೂಲಸೌಲಭ್ಯಗಳ ಕೊರತೆ ಕಾಡತೊಡಗಿದೆ. ಇದು ಕ್ರೀಡಾಪಟುಗಳ ಸಾಧನೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕ್ರೀಡಾ ಆಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಹೊರ ಆವರಣದಲ್ಲಿ ಕೊಳಚೆ ನೀರು ತುಂಬಿದ್ದರೆ, ಕೊಠಡಿಗಳಲ್ಲಿ ಉಳಿದುಕೊಳ್ಳಲು ಕ್ರೀಡಾಪಟುಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಛಾವಣಿಯಿಂದ ಗಾರೆ ಕಳಚಿ ಬೀಳುವಂತೆ ಕಾಣುತ್ತಿದ್ದು ಗೋಡೆಗಳಿಲ್ಲಿ ನೀರಿನ ಅಂಶ ನಿಂತಿದೆ.
‘ಇಂಥ ಸ್ಥಿತಿಯಲ್ಲಿ ಕ್ರೀಡಾಪಟುಗಳು ಸಾಧನೆ ಮಾಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಹಿರಿಯ ಕ್ರೀಡಾಪಟು ಒಬ್ಬರು ‘ಈ ಸ್ಥಿತಿಗೆ ಪರಿಹಾರ ಅಗತ್ಯ’ ಎಂದಿದ್ದಾರೆ.