ಗುಬ್ಬಿ: ‘ದೈಹಿಕ, ಮಾನಸಿಕ ಸಿದ್ಧತೆ ಪಕ್ವವಾದರಷ್ಟೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು’ ತುಮಕೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಆರ್.ಸುದೀಪ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಅಂತರ ಕಾಲೇಜು ಪುರಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
‘ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಓದುವ ಪದವೀಧರರ ದೈಹಿಕ ಆರೋಗ್ಯ ಗಟ್ಟಿಯಾಗಿರುತ್ತದೆ. ಮಾನಸಿಕವಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಕ್ರೀಡಾಕ್ಷೇತ್ರಕ್ಕೆ ಒಗ್ಗಿಕೊಳ್ಳಲು ಯುವತಿಯರು ಹಿಂದೇಟು ಹಾಕುತ್ತಾರೆ. ಈ ಮನೋಭಾವ ತೊಲಗಬೇಕಾದರೆ ಕ್ರೀಡಾ ಸಂಘಗಳು ಹಾಗೂ ಕ್ಲಬ್ಗಳು ಪೋಷಕರಿಗೆ ತಿಳಿಹೇಳುವ ಪ್ರಯತ್ನವನ್ನು ಮಾಡಬೇಕು’ ಎಂದು ತಿಳಿಸಿದರು.
ಗುಬ್ಬಿ ಶ್ರೀಚನ್ನಬಸವೇಶ್ವರ ಕ್ರೀಡಾ ಸಂಘದ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ, ‘ಗುಬ್ಬಿ ಕ್ಷೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಇಲ್ಲಿನ ಕ್ರೀಡಾಪಟುಗಳು ಅಂತರರಾಷ್ಟ್ರೀಯ, ರಾಷ್ಟ್ರೀಯ ಕ್ರೀಡಾ ಪಂದ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಕುಸ್ತಿಯಲ್ಲಿ ಪೈಲ್ವಾನ್ಗಳು ಹಾಕುವ ಪಟ್ಟುಗಳಿಗೆ ಗುಬ್ಬಿ ಪೈಲ್ವಾನ್ಗಳು ಪ್ರಖ್ಯಾತಿ ಹೊಂದಿದ್ದಾರೆ’ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ವಿವಿಧ ಪದವಿ ಕಾಲೇಜುಗಳಿಂದ 52 ಯುವಕರು, 37 ಯುವತಿಯರು ಪಾಲ್ಗೊಂಡಿದ್ದರು.
ತುಮಕೂರು ವಿಶ್ವವಿದ್ಯಾಲಯ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ.ವೇಣುಗೋಪಾಲ್, ಪ್ರಾಚಾರ್ಯ ಸಿ.ಕೃಷ್ಣಪ್ಪ, ಪ್ರೊ.ಎಸ್.ಕೆ.ಪರ್ತಾಪುರ, ಡಾ.ಟಿ.ವೆಂಕಟಾಚಲಯ್ಯ, ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಪಿ.ಎಸ್.ಸುರೇಶ್ ಇದ್ದರು.