ಹಾಸನ: ತಾಲ್ಲೂಕಿನಲ್ಲಿ ಗುರುವಾರ ಸಂಜೆ ಸುರಿದ ಜೋರು ಮಳೆಗೆ ತೇಜೂರು ಗ್ರಾಮದಲ್ಲಿ 10 ಮನೆಗಳು ಕುಸಿದು ಬಿದ್ದಿವೆ.
ಶಿಥಿಲಗೊಂಡಿದ್ದ ಮಂಗಳೂರು ಹೆಂಚಿನ ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು, ಪಾತ್ರೆಗಳು, ಬಟ್ಟೆಗಳು ಮತ್ತು ಆಹಾರ ಸಾಮಗ್ರಿಗಳು ಸಂಪೂರ್ಣ ನೀರು ಪಾಲಾಗಿವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಅಲ್ಲದೇ ಐದಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿ ಉಂಟಾಗಿದೆ. ಮನೆ ಮುಂದಿನ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಅಕ್ಕಿ ಪಾತ್ರೆ ಮೇಲೆ ಮಣ್ಣು ಬಿದ್ದಿದ್ದು, ಪಾತ್ರೆಗಳು ಮಣ್ಣಿನ ರಾಶಿಯಲ್ಲಿ ಹೂತು ಹೋಗಿದೆ.
‘ಗೋಡೆ ಕುಸಿದು ಬಿದ್ದಾಗ ಮನೆಯಲ್ಲಿ ಯಾರು ಇರಲಿಲ್ಲ. ನಾನು ಹೊಲಕ್ಕೆ ಕೆಲಸಕ್ಕೆ ಹೋಗಿದೆ. ಮನೆ ಇಲ್ಲದೆ ಎಲ್ಲಿ ವಾಸಿಸುವುದು ಗೊತ್ತಾಗುತ್ತಿಲ್ಲ. ಪಾತ್ರೆಗಳು, ಆಹಾರ ಪದಾರ್ಥಗಳು ನೀರಿನಲ್ಲಿ ಮುಳುಗಿ ಹೋಗಿದೆ. ಸರ್ಕಾರ ಪರಿಹಾರ ನೀಡಬೇಕು. ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ಗ್ರಾಮದ ಲಕ್ಷ್ಮಮ್ಮ ಕಣ್ಣೀರಿಟ್ಟರು.
ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
</p><p>‘ಮನೆಗಳ ದುರಸ್ತಿಗೆ ತಾಲ್ಲೂಕು ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು’ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ಅಗಿಲೆ ಯೋಗಿಶ್ ಹೇಳದಿರು.</p><p>ನಗರದ ಸೇರಿದಂತೆ ವಿವಿಧೆಡೆ ಸಂಜೆ ಮಳೆಯಾಗಿದೆ. ಸಂಜೆ 4ಗಂಟೆಗೆ ಆರಂಭವಾದ ಮಳೆ ಸುಮಾರು ಒಂದು ತಾಸು ಜೋರಾಗಿ ಸುರಿಯಿತು. ನಂತರ ಬಿಟ್ಟು ಬಿಟ್ಟು ಬರಲಾರಂಭಿಸಿತು. ತಡ ರಾತ್ರಿವರೆಗೂ ತುಂತುರು ಮಳೆ ಬೀಳುತ್ತಿದೆ ಹಾಸನಾಂಬೆ ದರ್ಶನ ಪಡೆಯಲು ಬಂದಿದ್ದ ಬಕ್ತರು ಪರದಾಡಿದರು.</p></p>