ನವದೆಹಲಿ: ಮಧ್ಯಪ್ರದೇಶ ವೃತ್ತಿಪರ ಶಿಕ್ಷಣ ಕೋರ್ಸ್ಗಳ ಪ್ರವೇಶ ಮತ್ತು ನೇಮಕಾತಿ ಹಗರಣ (ವ್ಯಾಪಂ) ಬಯಲಿಗೆ ಬರುವ ಮುನ್ನವೇ ಸಾವನ್ನಪ್ಪಿದ್ದ ವ್ಯಕ್ತಿಗಳ ಹೆಸರನ್ನು ಪೊಲೀಸರು ವ್ಯಾಪಂ ಆರೋಪಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದನ್ನು ಸಿಬಿಐ ಪತ್ತೆಹಚ್ಚಿದೆ.
ವ್ಯಾಪಂ ಹಗರಣಕ್ಕೆ ಸಂಬಂಧಿಸಿದ 24 ವ್ಯಕ್ತಿಗಳ ನಿಗೂಢ ಸಾವಿನ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವ ಮುನ್ನವೇ 24 ಮಂದಿ ಪೈಕಿ 16 ಮಂದಿ ಸಾವನ್ನಪ್ಪಿದ್ದರು. ಇವರ ಸಾವಿನಲ್ಲಿ ಯಾವುದೇ ಪಿತೂರಿ ಕಂಡುಬಂದಿಲ್ಲ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿತ್ತು ಎಂದು ಸಿಬಿಐ ತಿಳಿಸಿದೆ.
2007ರ ಜೂನ್ 18ರಂದು ರಾಮ್ ಶಂಕರ್ (ಹೆಸರು ಬದಲಾಯಿಸಲಾಗಿದೆ) ಎಂಬುವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆದರೆ ಏಳು ವರ್ಷದ ನಂತರ ಅವರ ಹೆಸರನ್ನು ವ್ಯಾಪಂ ಹಗರಣದಲ್ಲಿ ಆರೋಪಿಯನ್ನಾಗಿ ಎಫ್ಐಆರ್ನಲ್ಲಿ ಸೇರ್ಪಡೆಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳಿಂದ ದೊಡ್ಡ ಮೊತ್ತದ ಹಣ ಪಡೆದು, ಪ್ರಶ್ನೆಗಳ ಉತ್ತರಿಸುತ್ತಿದ್ದ ಕಪಟವೇಷಧಾರಿಯಂತೆ ರಾಮ್ಶಂಕರ್ ಪ್ರಮುಖ ಪಾತ್ರ ವಹಿಸಿದ್ದರು 2014ರ ಜೂನ್18ರಂದು ರಾಜ್ಯ ಪೊಲೀಸರು ದಾಖಲಿಸಿದ್ದ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದರು.
ಅಚ್ಚರಿಯೆಂದರೆ ಎಫ್ಐಆರ್ನಲ್ಲಿ ದಾಖಲಾದ ರಾಮ್ಶಂಕರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು, ಅಲ್ಲದೇ ಇಬ್ಬರು ಪ್ರತ್ಯಕ್ಷದರ್ಶಿಗಳು ಕೂಡ ಇದನ್ನು ಖಚಿತಪಡಿಸಿದ್ದರು. ಆದರೆ ಮಧ್ಯಪ್ರದೇಶ ಪೊಲೀಸರು ಸತ್ತವ್ಯಕ್ತಿಯನ್ನು ಎಫ್ಐಆರ್ನಲ್ಲಿ ಸೇರಿಸಿ ಅವಾಂತರಕ್ಕೆ ಕಾರಣವಾಗಿದ್ದರು.