ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ರಾಮನಗರ ಜಿಲ್ಲೆಗೆ ಅಂತಿಮ ರೂಪ

Last Updated 17 ಅಕ್ಟೋಬರ್ 2017, 9:01 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ‘ವಿಷನ್ ಕರ್ನಾಟಕ -2025’ ರೂಪಿಸುವ ನಿಟ್ಟಿನಲ್ಲಿ ಜಿಲ್ಲೆಯಿಂದ ಸಂಗ್ರಹಿಸಿದ ಜನಾಭಿಪ್ರಾಯ ‘ನನ್ನ ಕನಸಿನ ರಾಮನಗರ ಜಿಲ್ಲೆ -2025’ ಗೆ ಸೋಮವಾರ ನಡೆದ ಕಾರ್ಯಾ ಗಾರದಲ್ಲಿ ಜಿಲ್ಲೆಯ ವಿವಿಧ ವರ್ಗಗಳ ಜನರು ಹಲವು ಸಲಹೆಗಳನ್ನು ನೀಡಿದರು.

ಜನಪ್ರತಿನಿಧಿಗಳು, ಜನ ಸಾಮಾನ್ಯರು ಪ್ರಗತಿಪರ ಚಿಂತಕರು ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡಂತೆ ವಿಷಯವಾರು ಚರ್ಚಿಸಿ ಆಗಬೇಕಾಗಿರುವ ಪ್ರಗತಿಯ ಆದ್ಯತೆ, ಸಾಧ್ಯತೆಗಳನ್ನು ಪಟ್ಟಿಮಾಡಿ ಅದನ್ನು ಈಡೇರಿಸಲು ಯೋಜನೆ ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಕಾರ್ಯಾಗಾರದಲ್ಲಿ ಸುಮಾರು 13 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಕೃಷಿ ಮತ್ತು ಸಂಬಂಧ ಪಟ್ಟ ಕ್ಷೇತ್ರಗಳು, ಮೂಲಸೌಕರ್ಯ, ರಸ್ತೆ ಕುಡಿಯುವ ನೀರಿನ ಸೌಲಭ್ಯ ಮತ್ತು ನೈರ್ಮಲಿಕರಣ, ಉದ್ಯೋಗ ಮತ್ತು ಕೌಶಲ್ಯ, ಕೈಗಾರಿಕೆ ಅಭಿವೃದ್ಧಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ದಿ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಸೇವೆಗಳು, ಆಡಳಿತ, ಕಾನೂನು ಸುವ್ಯವಸ್ಥೆ ನ್ಯಾಯ ಕ್ಷೇತ್ರಗಳಲ್ಲಿನ ಸುಧಾರಣೆಗೆ ಇರುವ ಸಾಧ್ಯತೆಗಳ ಬಗ್ಗೆ ಆಗಬೇಕಾಗಿರುವ ಸುಸ್ಥಿರ ಅಭಿವೃದ್ಧಿ ಬಗ್ಗೆ ಕುರಿತು ವಿವಿಧ ಕ್ಷೇತ್ರಗಳ ತಜ್ಞರು ಅಭಿಪ್ರಾಯಗಳನ್ನು ಮಂಡಿಸಿದರು.

ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆ ಮತ್ತು ವಿಷನ್ 2025 ಡಾಕ್ಯುಮೆಂಟ್ ಸಿಇಒ ರೇಣುಕಾ ಚಿದಂಬರಂ, ಜಿಲ್ಲಾಧಿಕಾರಿ ಬಿ.ಆರ್. ಮಮತಾ ಗುಂಪು ಚರ್ಚೆಯಲ್ಲಿ ಭಾಗವಹಿಸಿ ಚರ್ಚೆ ಸಾಗಬೇಕಿರುವ ದಿಕ್ಕು-, ಯೋಜನೆಗಳು ರಾಜ್ಯ ವ್ಯಾಪ್ತಿಗೆ ಅನುಷ್ಠಾನಕ್ಕೆ ಸಾಧ್ಯವಾಗುವಂತೆ ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದರು.

‘ಈ ಚರ್ಚೆಗಳಿಂದ ರಾಜ್ಯದ ಒಟ್ಟಾರೆ ಪ್ರಗತಿಗೆ ಅಗತ್ಯವಿರುವ ಹಾಗೂ ಅನುಷ್ಠಾನ ಯೋಗ್ಯ ಮತ್ತು ಸಾಧ್ಯವಾದ ಅಭಿಪ್ರಾಯ ಪೂರಕ ದಾಖಲೆಗಳೊಂದಿಗೆ ಮಂಡಿಸಿದರೆ ಅನುಕೂಲವಾಗಲಿದೆ’ ಎಂದು ರೇಣುಕಾ ಚಿದಂಬರಂ ಹೇಳಿದರು.

‘ಹೆಣ್ಣು ಭ್ರೂಣಹತ್ಯೆ ತಡೆ, ಕೆರೆಗಳ ಪುನಶ್ಚೇತನ, ಮೂಲಭೂತ ಸೌಕರ್ಯ ಅಭಿವೃದ್ಧಿ - ಸಾರಿಗೆ, ಸುವ್ಯವಸ್ಥೆ, ಕಾನೂನು ಹಾಗೂ ಆಡಳಿತ ಸುಧಾರಣೆ ಮತ್ತಿತರ ವಿಷಯಗಳ ಕುರಿತು ಇಂದಿನ ಸವಾಲುಗಳನ್ನು ಹೇಗೆ ಎದುರಿಸಬಹುದೆಂಬುದರ ಬಗ್ಗೆ ವಾಸ್ತವ ನೆಲಗಟ್ಟಿನಲ್ಲಿ ಅಭಿಪ್ರಾಯವನ್ನು ಕ್ರೋಡೀಕರಿಸಿ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT