ಸೊರಬ: ರಾಜ್ಯದಲ್ಲಿ ಜನಪರ ಯೋಜನೆಗಳ ಮೂಲಕ ಹಗರಣ ಮುಕ್ತ ಆಡಳಿತ ನಡೆಸಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ಕೆಪಿಸಿಸಿ ಉಸ್ತುವಾರಿ ಸದಸ್ಯ ಮಧು ಯಾಸ್ಕಿ ಗೌಡ್ ಹೇಳಿದರು. ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಳೆದ ನಾಲ್ಕುವರೆ ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳಿಂದ ಜನರಿಗೆ ಹತ್ತಿರವಾಗಿದೆ. ಕಾಂಗ್ರೆಸ್ ತಂದ ಯೋಜನೆಗಳನ್ನು ಜನಸಾಮಾನ್ಯರ ಮನೆಗಳಿಗೆ ತಪುಪಿಸಿದ್ದಲ್ಲಿ ಮತ್ತೆ ಆಡಳಿತ ಹಿಡಿಯುವುದು ಖಚಿತ. ಪ್ರತಿಯೊಬ್ಬ ಮುಖಂಡ-ಕಾರ್ಯಕರ್ತನೂ ಕಾಂಗ್ರೆಸ್ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುತ್ತಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಲ್ಲಿ ಬೂತ್ ಮಟ್ಟದಿಂದಲೂ ಪಕ್ಷ ಕಟ್ಟಲು ಸಹಾಯಕವಾಗುತ್ತದೆ ಎಂದರು.
ಪ್ರಧಾನಿ ಮೋದಿಯವರು ಪ್ರಚಾರಕ್ಕೆಂದೇ ಹುರುಳಿಲ್ಲದ ಮನ್ ಕೀ ಬಾತ್ ಕಾರ್ಯಕ್ರಮ ನೀಡಿದರೆ, ಕಾಂಗ್ರೆಸ್ ಕಾಮ್ಕೀ ಬಾತ್ (ಕೆಲಸವೇ ಮುಖ್ಯ) ನೀಡಿದೆ ಎಂದು ಹೇಳಿದರು. ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಮಾತನಾಡಿ, ‘ಕಾಂಗ್ರೆಸ್ನಿಂದ ಎಲ್ಲಾ ಅಧಿಕಾರಗಳನ್ನು ಅನುಭವಿಸಿ ಪಕ್ಷ ತೊರೆದವರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗಿಲ್ಲ. ತಾಲ್ಲೂಕಿನಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸಿ, ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು. ಅಭ್ಯರ್ಥಿಯ ಗೆಲುವಿನ ಉದ್ದೇಶದಿಂದ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.
ಪಕ್ಷ ಸಂಘಟಿಸಲು ಬೂತ್ ಮಟ್ಟದ ಅಧ್ಯಕ್ಷರಿಗೆ ಕಾಂಗ್ರೆಸ್ ಪಕ್ಷ ಗುರುತಿನ ಚೀಟಿ ವಿತರಿಸುವ ಜೊತೆಗೆ ರಾಜ್ಯ-ರಾಷ್ಟ್ರ ನಾಯಕರುಗಳ ಜೊತೆ ನೇರ ಕರೆ ಮಾಡಿ ಮಾತನಾಡುವುದಕ್ಕೆ ಅವಕಾಶ ಕಲ್ಪಿಸಲಾಗುವುದು. ಯಾವುದೆ ದೋಷ ಹಾಗೂ ಭಿನ್ನ ಮತವಿಲ್ಲದೆ ಆಡಳಿತ ನಡೆಸಿದ ಕಾಂಗ್ರೆಸ್ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಮುಳುಗುವ ಪಕ್ಷವಾಗಿದೆ. ಆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದರಿಂದ ತಾಲ್ಲೂಕಿಗೆ ಯಾವುದೇ ಲಾಭವಿಲ್ಲ ಎಂಬುದನ್ನು ಜನರು ಅರಿಯಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿರುವುದು ಕಾಂಗ್ರೆಸ್ ಸರ್ಕಾರ ಎಂಬುದನ್ನು ಜನರು ಮನಗಾಣಬೇಕು. ಇಂತಹ ಮಹತ್ವ ಪೂರ್ಣ ಕೆಲಸಗಳಿಗೆ ಕಾಂಗ್ರೆಸ್ ಪಕ್ಷವನ್ನು ಜನರು ಬೆಂಬಲಿಸಬೇಕು ಎಂದರು.
ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಪಕ್ಷ ತಾಯಿಗೆ ಸಮಾನವಾಗಿದ್ದು, ತಾಯಿಯ ಆರೈಕೆ ಹಾಗೂ ಹಾರೈಕೆಯಲ್ಲಿ ಎಲ್ಲಾ ಸ್ಥಾನ-ಮಾನಗಳನ್ನು ಅನುಭವಿಸಿ ಪಕ್ಷಕ್ಕೆ ಮೋಸ ಮಾಡಿದವರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಅವರಿಂದ ಪಕ್ಷಕ್ಕೆ ನಷ್ಟವೂ ಇಲ್ಲ. ತಾಲ್ಲೂಕು ಹೋರಾಟದ ಭೂಮಿಯಾಗಿದ್ದು, ಭೂಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಕುಪ್ಪಗಡ್ಡೆ ಮರಿಯಪ್ಪ, ಹಿರೇಶಕುನದ ಬಸವಣ್ಯಪ್ಪ ಸೇರಿದಂತೆ ಹಲವರನ್ನು ಸ್ಮರಿಸಬೇಕಿದೆ. ನಾವು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು.
ಜನಸಾಮಾನ್ಯರು ನೆಲೆಸುವ ಭೂಮಿಗೆ ಹಕ್ಕುಗಾರಿಗೆಯನ್ನು ನೀಡಿದ ಹಾಗೂ ರಾಜ್ಯ-ರಾಷ್ಟ್ರವನ್ನು ಜನಪರ ಯೋಜನೆಗಳ ಮೂಲಕ ಸಮತೋಲನದ ಸ್ಥಿತಿಯಲ್ಲಿ ಕೊಂಡೊಯ್ಯುವ ಕಾಂಗ್ರೆಸ್ ಸಕರ್ಾರವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಜನರು ಮುಂದಾಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗ ಸುಲ್ತಾನ್, ಸದಸ್ಯ ರಾಮಲಿಂಗಯ್ಯ, ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ಉಪಾಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ, ತಾಲ್ಲೂಕು ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್, ಪ್ರಮುಖರಾದ ವಕೀಲ ಲಕ್ಮೀಕಾಂತ್ ಚಿಮನೂರು, ಮಂಜುನಾಥ್ ಕೆ.ಹಳೇಸೊರಬ, ಬಾಸೂರು ಚಂದ್ರೇಗೌಡ, ಪಲ್ಲವಿ, ಕೆರಿಯಪ್ಪ, ಸುಜಾಯತ್ವುಲ್ಲಾ, ಲೋಲಾಕ್ಷಮ್ಮ, ನಾಗರಾಜ್ ಚಿಕ್ಕಸವಿ, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಡಿಬಿ ಅಣ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.