ಲಾಹೋರ್ (ಪಿಟಿಐ): ಮುಂಬೈ ದಾಳಿಯ ಸಂಚುಕೋರ, ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ನ ಗೃಹಬಂಧನದ ಅವಧಿಯನ್ನು ಸಾರ್ವಜನಿಕ ಸುರಕ್ಷತೆ ಕಾನೂನಿನ ಅಡಿಯಲ್ಲಿ ವಿಸ್ತರಿಸಬೇಕು ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತದ ಸರ್ಕಾರ ನ್ಯಾಯಾಲಯಕ್ಕೆ ಕೋರಿದೆ.
ಭಯೋತ್ಪಾದನೆ ತಡೆ ಕಾನೂನಿನ ಅಡಿಯಲ್ಲಿ ಹಫೀಜ್ನನ್ನು ಗೃಹಬಂಧನದಲ್ಲಿ ಮುಂದುವರಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಎರಡು ದಿನಗಳ ಹಿಂದಷ್ಟೇ ಸರ್ಕಾರವು ಹಿಂಪಡೆದಿತ್ತು.
ಹಫೀಜ್ ಹಾಗೂ ಆತನ ನಾಲ್ವರು ಸಹಚರರನ್ನು ಕಳೆದ ಜನವರಿ 31ರಿಂದ ಗೃಹಬಂಧನದಲ್ಲಿ ಇರಿಸಲಾಗಿದೆ. ಇದೇ 24ಕ್ಕೆ ಗೃಹಬಂಧನದ ಅವಧಿ ಕೊನೆಗೊಳ್ಳಲಿದೆ.
ಇಲ್ಲಿನ ಕಾನೂನಿನ ಪ್ರಕಾರ ವ್ಯಕ್ತಿಯೊಬ್ಬನನ್ನು ಗರಿಷ್ಠ ಮೂರು ತಿಂಗಳವರೆಗೆ ಬಂಧನದಲ್ಲಿ ಇರಿಸಬಹುದಾಗಿದೆ. ಅದನ್ನು ಮತ್ತೆ ವಿಸ್ತರಿಸಬೇಕಾದರೆ ನ್ಯಾಯಾಂಗ ಪರಿಶೀಲನಾ ಮಂಡಳಿಯ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ಸಂಬಂಧ ಸಯೀದ್ ಮತ್ತು ಆತನ ನಾಲ್ವರು ಸಹಚರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.