ಗುಂಡ್ಲುಪೇಟೆ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೊದಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಮುಂಜಾನೆ ಗಣಪತಿ ಹೋಮ ನಡೆಸಲಾಗಿದೆ.
ಡಿಪೊದ ಬಸ್ಗಳು ಇತ್ತೀಚೆಗೆ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿವೆ. ಹೀಗಾಗಿ ವಿಘ್ನ ನಿವಾರಣೆಗಾಗಿ ಗಣಪತಿ ಹೋಮ ಆಯೋಜಿಸಲಾಗಿತ್ತು. ಇದಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.
ಡಿಪೊ ವ್ಯವಸ್ಥಾಪಕ ಜಯಕುಮಾರ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 4.30ಕ್ಕೆ ಪೂಜೆ ನಡೆದಿದ್ದು, ಸಿಬ್ಬಂದಿಗೆ ಪ್ರಸಾದ ವಿತರಣೆ ಮಾಡಲಾಗಿದೆ.
ಈ ವಿಷಯ ಮಾಧ್ಯಮದವರಿಗೆ ತಿಳಿಯುವ ಹೊತ್ತಿಗೆ ಹೋಮ ನಡೆದ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಈ ಬಗ್ಗೆ ವಿಚಾರಿಸಿದಾಗ, ಸ್ಥಳದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಡಿಪೊದಲ್ಲಿ ಹೋಮ ನಡೆಸಿರುವ ದೃಶ್ಯಗಳು ಮಾಧ್ಯಮಗಳಿಗೆ ದೊರೆತಿವೆ.