‘ಸಂಹಾರ’ ಚಿತ್ರದ ಟ್ರೇಲರ್ ನೋಡಿದ ತಕ್ಷಣ ಮನಸಿಗೆ ಬರುವ ಪ್ರಶ್ನೆ ಇದು. ನಿರ್ಮಾಣ ಹಂತದ ಕಟ್ಟಡದಲ್ಲಿ ಅಂಧ ನಾಯಕ ಹೊಡೆದಾಡುವ ದೃಶ್ಯ ಗಮನಿಸಿದವರಿಗೆ ಇಂಥದ್ದೊಂದು ಪ್ರಶ್ನೆ ತಕ್ಷಣ ಮೂಡುತ್ತದೆ. ಆದರೆ ನಂತರ ಮೂಡಿಬರುವ ದೃಶ್ಯಗಳು ‘ಇಲ್ಲ ಬಿಡು, ಅದರಿಂದಾಚೆಗೆ ಇನ್ನೂ ಏನೇನೋ ಇವೆ’ ಎಂಬ ಭಾವ ತರುತ್ತವೆ.
ಚಿರಂಜೀವಿ ಸರ್ಜಾ ಅಭಿನಯದ ‘ಸಂಹಾರ’ದ ಟ್ರೇಲರ್ ಅವರ ಹುಟ್ಟುಹಬ್ಬದಂದೇ (ಅ.17) ಬಿಡುಗಡೆಯಾಗಿರುವುದು ವಿಶೇಷ. ದೃಷ್ಟಿ ಇಲ್ಲದ ಪ್ರೇಮಿಯಾಗಿ, ಮರಳಿ ದೃಷ್ಟಿ ಗಳಿಸಿದ ಶೋಧಕನಾಗಿ ಚಿರು ಗಮನ ಸೆಳೆಯುತ್ತಾರೆ.
ನಾಯಕಿಯರಾಗಿ ಹರಿಪ್ರಿಯ ಮತ್ತು ಕಾವ್ಯಾಶೆಟ್ಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ರಾಜಾಹುಲಿಯಾಗಿ ಕಾಣಿಸಿಕೊಂಡಿರುವ ಚಿಕ್ಕಣ್ಣ ಪಾತ್ರ ಕುತೂಹಲ ಉಳಿಸಿಕೊಳ್ಳುತ್ತದೆ.
ರಾಜಾಹುಲಿ, ರುದ್ರತಾಂಡವ ಚಿತ್ರಗಳನ್ನು ನಿರ್ದೇಶಿಸಿದ್ದ ಗುರು ದೇಶಪಾಂಡೆ ‘ಸಂಹಾರ’ ಸಿನಿಮಾದ ಜವಾಬ್ದಾರಿ ಹೊತ್ತಿದ್ದಾರೆ. ರವಿ ಬಸ್ರೂರು ಸಂಗೀತ ಹಾಗೂ ಜಗದೀಶ್ ವಾಲಿ ಛಾಯಾಗ್ರಹಣ ಇದೆ.