ಚೆನ್ನೈ: ಆರ್.ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಸೊಸೆ ಜೆ. ದೀಪಾ ಅವರು ಗುರುವಾರ ಹೇಳಿದ್ದಾರೆ.
ಡಿಸೆಂಬರ್ 31ರ ಮೊದಲು ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗವು ಈಚೆಗೆ ಘೋಷಿಸಿತ್ತು.
‘ನಾನು ಖಂಡಿತಾ ಸ್ಪರ್ಧಿಸುತ್ತೇನೆ ಮತ್ತು ಜನರ ಬೆಂಬಲದಿಂದ ಗೆಲ್ಲುತ್ತೇನೆ’ ಎಂದು ದೀಪಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಎಂಜಿಆರ್ ಅಮ್ಮಾ ದೀಪಾ ಪೆರವೈ ಪಕ್ಷದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಆಯ್ಕೆಯಾದರೆ ಜಯಲಲಿತಾ ಅವರು ಆರಂಭಿಸಿದ್ದ ಕಲ್ಯಾಣ ಯೋಜನೆಗಳನ್ನು ಮುಂದುವರಿಸುತ್ತೇನೆ’ ಎಂದಿದ್ದಾರೆ.
ಮುಖ್ಯಮಂತ್ರಿ ಎಡಪಳ್ಳಿ ಪಳನಿಸ್ವಾಮಿ ಬಣಕ್ಕೆ ಸೇರ್ಪಡೆಗೊಳ್ಳುವ ವಿಚಾರವನ್ನು ತಳ್ಳಿಹಾಕಿರುವ ದೀಪಾ ಅವರು, ‘ಪಕ್ಷವನ್ನು ಬಲಿಷ್ಠಗೊಳಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಎಐಎಡಿಎಂಕೆಯ ಎರಡೆಲೆ ಚಿಹ್ನೆ ತಮ್ಮ ಪಕ್ಷಕ್ಕೆ ಲಭಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.