ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿ ಬಿಂಡಿಗ ಆದಿಶಕ್ತಿ ದೇವೀರಮ್ಮ ದೇವಾಲಯದಲ್ಲಿ ದೀಪೋತ್ಸವದ ಮೂರನೇ ದಿನವಾದ ಶುಕ್ರವಾರ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ದೀಪಾವಳಿಯಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲವನ್ನು ಹೂವು, ರಂಗೋಲಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರು ದೇವೀರಮ್ಮ, ಚಿಕ್ಕಮ್ಮ, ಹಾಲಮ್ಮ ದೇವಿಯರ ದರ್ಶನ ಮಾಡಿದರು. ಜಾತ್ರೆ ಅಂಗವಾಗಿ ದೇವಿಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದರ್ಶನಕ್ಕೆ ಸರದಿಯಲ್ಲಿ ಸಾಗಲು ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸಾಲಿನಲ್ಲಿ ಸಾಗಿ ದರ್ಶನ ಮಾಡಿ ದೇಗುಲ ಪ್ರದಕ್ಷಿಣೆ ಹಾಕಿ ತೀರ್ಥ, ಹೂವು ಸ್ವೀಕರಿಸಿದರು.
ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕುಂಕುಮಾರ್ಚನೆ ಧಾರ್ಮಿಕ ವಿಧಿಗಳು ನೆರವೇರಿದವು.
ಮಲ್ಲೇನಹಳ್ಳಿಯಿಂದ ದೇಗುಲ ಮಾರ್ಗದಲ್ಲಿ ಏಕಮುಖ ಸಂಚಾರ ಕಲ್ಪಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.