ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಸುಮಾರು ₹2,500 ಕೋಟಿ ಅನುದಾನ ಮಂಜೂರಾಗುವ ನಿರೀಕ್ಷೆ ಇದೆ ಎಂದು ಶಾಸಕ ಜೆ.ರ್.ಲೋಬೊ ಹೇಳಿದರು.
₹1.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಜಪ್ಪಿನಮೊಗರು ರಸ್ತೆ ಕಾಂಕ್ರಿಟೀಕರಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇದರಲ್ಲಿ ರಾಜಕೀಯ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಮಾಡುವ ದೃಷ್ಟಿಯಿಂದ ಎಡಿಬಿ ಎರಡನೇ ಹಂತದ ಕಾಮಗಾರಿಗೆ ₹600 ಕೋಟಿ ಮಂಜೂರು ಮಾಡಿದ್ದಾರೆ ಎಂದರು.
‘ನನ್ನ ಕ್ಷೇತ್ರವಲ್ಲದಿದ್ದರೂ ನಾನು ಮುತುವರ್ಜಿ ವಹಿಸಿ ಪಂಜಿಮೊಗರುವಿನಲ್ಲಿ ಅಂತರರಾಷ್ಟ್ರೀಯ ಕ್ರೀಡಾ ಗ್ರಾಮವಾಗಿ ಮಾಡಲು ಸುಮಾರು 1ಸಾವಿರ ಎಕರೆ ಭೂಮಿಯನ್ನು ಗುರುತಿಸಿದ್ದೇನೆ’ ಎಂದ ಅವರು, ನೇತ್ರಾವತಿ ಸೇತುವೆಯಿಂದ ಕಣ್ಣೂರು ಮಸೀದಿವರೆಗೆ ನದಿ ತೀರದಲ್ಲಿ ಚುತುಷ್ಪಥ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಸುಮಾರು ₹350 ರಿಂದ 400 ಕೋಟಿ ಹೂಡಿಕೆ ಆಗಲಿದೆ. ಇದನ್ನು ಖಾಸಗಿ ಮತ್ತು ಸರ್ಕಾರಿ ಒಡೆತನದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.
ಮಂಗಳೂರು ಹಳೆ ಬಂದರು ಮತ್ತು ನವಮಂಗಳೂರು ಬಂದರಿಗೆ ಸಂಪರ್ಕ ಸಾಧಿಸುವ ಯೋಜನೆಯೂ ಇದೆ ಎಂದ ಅವರು, ಶಾಸಕ ಜೆ.ಆರ್.ಲೋಬೊ, ಜನರ ಸಹಕಾರವಿದ್ದರೆ ಮಾತ್ರ ಇದೆಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎಂದರು.
ಜಪ್ಪಿನಮೊಗರು ನಗರವನ್ನು ಅಭಿವೃದ್ಧಿ ಪಡಿಸಲು ಮೊದಲ ಕಂತಾಗಿ ₹1.5 ಕೋಟಿ ಮಂಜೂರಾಗಿದ್ದು, ಜನರು ಆಸಕ್ತಿ ವಹಿಸಿ ಜಾಗ ಬಿಟ್ಟುಕೊಟ್ಟರೆ ಇನ್ನೂ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ, ಪಾಲಿಕೆ ಸದಸ್ಯರಾದ ಸುರೇಂದ್ರ, ಪ್ರವೀಣಚಂದ್ರ ಆಳ್ವ, ಸದಾನಂದ ಆಳ್ವ, ಮಂಗಳೂರು ತಾಲ್ಲೂಕು ಭೂನ್ಯಾಯ ಮಂಡಳಿ ಸದಸ್ಯ ಡೆನ್ನಿಸ್ ಡಿಸಿಲ್ವಾ ಇದ್ದರು.