ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಚನಾತ್ಮಕ ಕಾರ್ಯಕ್ರಮವಾಗಲಿ...’

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅತಿಯಾದ ಮಳೆಯಿಂದಾಗಿ ರಾಜ್ಯದಲ್ಲಿ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ, ರಾಜ್ಯದ ಹಣಕಾಸಿನ ಸ್ಥಿತಿಯೂ ಚೆನ್ನಾಗಿಲ್ಲ. ಇಂಥ ಸ್ಥಿತಿಯಲ್ಲಿ ವಿಧಾನಸೌಧದ ವಜ್ರಮಹೋತ್ಸವ ಆಚರಣೆಗಾಗಿ ದುಂದು ವೆಚ್ಚ ಮಾಡುತ್ತಿರುವುದು ಸರಿಯಲ್ಲ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

‘ಅವಿವೇಕದ ಕೆಲಸ’
ವಿಧಾನಸೌಧಕ್ಕೆ 75 ವರ್ಷ ತುಂಬುತ್ತಿರುವುದು ನಮ್ಮೆಲ್ಲರಿಗೂ ಖುಷಿಯ ವಿಚಾರ. ಅದನ್ನು ಒಂದು ದಿನ ಮರೆತು ಹೋಗುವ ಕಾರ್ಯಕ್ರಮವ ನ್ನಾಗಿ ರೂಪಿಸಿ ರುವುದು ಅವಿವೇಕತನದ ಕೆಲಸವೇ ಸರಿ. ತಜ್ಞರ ಜೊತೆಗೆ ಚರ್ಚಿಸಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದ್ದರೆ, ಜನರು ಬೆಂಬಲವಾಗಿ ನಿಲ್ಲುತ್ತಿದ್ದರು.

–ಹಿತೇಶ್‌, ಸಾಫ್ಟ್‌ವೇರ್‌ ಉದ್ಯೋಗಿ
***

‘ದುಂದು ವೆಚ್ಚ ಬೇಡ’
ವಿಧಾನಸೌಧದ ವಜ್ರಮಹೋತ್ಸವದ ಕಾರ್ಯಕ್ರಮ ಅಗತ್ಯವೇ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಸಮಯದಲ್ಲಿ 1983ರಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಭೀಕರ ಬರಗಾಲ ಇತ್ತು. ಆಗಲೂ ಈ ರೀತಿಯ ಮಾತುಗಳು ಕೇಳಿ ಬಂದಿದ್ದವು. ಆಗ ಶಿವರಾಮ ಕಾರಂತರು ಒಂದು ಮಾತು ಹೇಳಿದ್ದರು. ‘ಬರಗಾಲ ಇದೆ ಎಂದು ಹಬ್ಬ, ಉತ್ಸವಗಳ ಆಚರಣೆಯನ್ನು ಬಿಡುತ್ತೇವೆಯೇ? ಇಲ್ಲವಲ್ಲ, ಹಾಗೆಯೇ ಸಾಂಸ್ಕೃತಿಕ ಮಹತ್ವವಿರುವ ಕಾರ್ಯಕ್ರಮಗಳು ನಡೆಯಬೇಕು’ ಎಂದಿದ್ದರು.

ವಿಧಾನಸೌಧ ವಜ್ರಮಹೋತ್ಸವ ಒಂದು ಸಾಂಸ್ಕೃತಿಕವಾಗಿ ಮಹತ್ವದ ದಿನ. ಅದಕ್ಕಾಗಿ ಕಾರ್ಯಕ್ರಮ ರೂಪಿಸುವುದು ಅಗತ್ಯ. ಆದರೆ, ಅದು ರಚನಾತ್ಮಕವಾಗಿ ಇರಬೇಕೇ ಹೊರತು ದುಂದು ವೆಚ್ಚಕ್ಕೆ ದಾರಿಯಾಗಬಾರದು.

–ಆರಿಫ್‌ ರಾಜಾ, ಕವಿ

***

‘ವಿವೇಕದಿಂದ ಯೋಜನೆ ರೂಪಿಸಿ’
ವಿಧಾನಸೌಧದ ವಜ್ರಮಹೋತ್ಸವ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವಂತಹ ಕಾರ್ಯಕ್ರಮವಾಗಬೇಕು. ಹಣ ಇದೆ ಎಂದು ಏನಾದರೊಂದು ಮಾಡಿಬಿಡಬೇಕು ಎನ್ನುವ ಮನಸ್ಥಿತಿ

ಸರಿಯಲ್ಲ. ಈ ರೀತಿಯ ಕಾರ್ಯಕ್ರಮಗಳನ್ನು ಸ್ವಲ್ಪ ವಿವೇಕದಿಂದ ರೂಪಿಸಬೇಕು. ಒಂದಿಷ್ಟು ಜನರೊಂದಿಗೆ ಚರ್ಚೆ ಮಾಡಿ ಕಾರ್ಯಕ್ರಮದ ಕ್ರಿಯಾ ಯೋಜನೆ
ರೂಪಿಸಬೇಕಿತ್ತು.

ರೋರಿಕ್‌ ಎಸ್ಟೇಟ್‌ ಈಗ ಸರ್ಕಾರಕ್ಕೆ ಸೇರಿದೆ. 400 ಎಕರೆ ಪ್ರದೇಶವಿರುವ ಆ ಜಾಗದಲ್ಲಿ ಒಂದು ಕಲಾಕೇಂದ್ರ ಸ್ಥಾಪಿಸಬಹುದು. ಆ ಮೂಲಕ ವಜ್ರಮಹೋತ್ಸವವನ್ನು ಸಂಭ್ರಮಿಸಬಹುದು. ಒಂದು ಕೆಲಸ ಸಾಕಷ್ಟು ಜನರಿಗೆ ಪ್ರೇರಣೆ ಆಗಬೇಕು

–ಎಂ.ಎಸ್‌. ಮೂರ್ತಿ, ಕಲಾವಿದ

***

‘ಟ್ರಾಫಿಕ್‌ ಸಮಸ್ಯೆ: ಪರಿಹಾರ ಹುಡುಕಿ’
ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಯಾವುದಾದರೂ ಕ್ರಮ ಕೈಗೊಳ್ಳುವುದಕ್ಕೆ ವಜ್ರಮಹೋತ್ಸವ ದಾರಿಯಾಗಬಹುದಿತ್ತು. ಮೆಟ್ರೊ ಕಾಮಗಾರಿಗೆ ಇನ್ನಷ್ಟು ವೇಗ ನೀಡ ಬಹುದಿತ್ತು. ರಸ್ತೆಗಳನ್ನು ದುರಸ್ತಿಗೊಳಿಸಬಹುದಿತ್ತು ಹೀಗೆ ಅನೇಕ ಕೆಲಸಗಳನ್ನು ಈ ನೆಪದಲ್ಲಿ ಮಾಡಲು ಸಾಧ್ಯವಿತ್ತು.

–ವಿ. ದೀಪಾ, ಸಾಫ್ಟ್‌ವೇರ್‌ ಉದ್ಯೋಗಿ

***

‘ರೈತರ ಬೆಳೆಗೆ ಪರಿಹಾರ ನೀಡಿ’

ಬಹಳ ವರ್ಷಗಳ ನಂತರ ರಾಜ್ಯದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಅನೇಕ ರೈತರ ಬೆಳೆ ಹಾನಿಯಾಗಿದೆ.

ಅವರಿಗೆ ಪರಿಹಾರ ನೀಡುವ ಮೂಲಕ ರೈತರೊಂದಿಗೆ ವಜ್ರಮಹೋತ್ಸವ ಸಂಭ್ರಮಾಚರಣೆ ಮಾಡಬಹುದಿತ್ತು. ಸಾಲದ ಶೂಲದಲ್ಲಿ ಸಾಕಷ್ಟು ರೈತರು ಸಿಲುಕಿದ್ದಾರೆ. ಅವರೆಲ್ಲರ ಸಾಲ ಮನ್ನಾ ಮಾಡಿ, ಆ ಖುಷಿಯಲ್ಲಿ ವಜ್ರಮಹೋತ್ಸವ ಆಚರಿಸುವಂತೆ ಆಗಿದ್ದರೆ ಜನರ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಬರುತ್ತಿತ್ತು.

–ಜಿ.ಕೆ. ಮಂಜುನಾಥ್‌, ಉದ್ಯೋಗಿ

***
ವಜ್ರಮಹೋತ್ಸವಕ್ಕೆ ಏನೆಲ್ಲ ಮಾಡಬಹುದು

* ವಿಧಾನಸೌಧ ಇತಿಹಾಸ ದಾಖಲಿಸುವ ಕೆಲಸ ಮಾಡಬಹುದಿತ್ತು

* ನಗರದಲ್ಲಿ ಬೃಹತ್‌ ಉದ್ಯಾನ ನಿರ್ಮಿಸಬಹುದು

* ಬಾಳಿಕೆ ಬರುವಂತಹ ರಸ್ತೆಗಳನ್ನು ನಿರ್ಮಿಸಬಹುದು

* 1,000 ಶೌಚಾಲಯಗಳನ್ನು ಕಟ್ಟಬಹುದಿತ್ತು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT