ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟಾನ್‌: ಜಾಗತಿಕ ಬ್ರ್ಯಾಂಡ್‌ ಹೆಬ್ಬಯಕೆ

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಭಾರತದ ದೈತ್ಯ ಸಂಸ್ಥೆಗಳು ವಿಶ್ವಮಾನ್ಯತೆ ಪಡೆದಿವೆ. ಇವೆಲ್ಲ ಸೇವಾ ವಲಯದಲ್ಲಿ ಮಹತ್ವದ ಸಾಧನೆ ಮಾಡಿದ್ದರೂ, ನವ ನವೀನ ಉತ್ಪನ್ನಗಳ ತಯಾರಿಕೆಯತ್ತ ಗಮನ ಹರಿಸದಿರುವುದು ಇವುಗಳ ಇವುಗಳ ಬಹುದೊಡ್ಡ ಕೊರತೆ. ಸೇವಾ ವಲಯದಲ್ಲಿ ಗಳಿಸಿದ್ದ ಅಪಾರ ಸಂಪತ್ತಿನ ಕೆಲ ಭಾಗವನ್ನಾದರೂ ತಂತ್ರಜ್ಞಾನ ಆಧಾರಿತ ಚುರುಕಿನ (ಸ್ಮಾರ್ಟ್‌) ಸಾಧನಗಳ ತಯಾರಿಕೆಯಲ್ಲಿ ತೊಡಗಿಸಿದ್ದರೆ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಈಗಾಗಲೇ ತೀವ್ರ ಸ್ಪರ್ಧೆ ಒಡ್ಡಬಹುದಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ತಮ್ಮಿಂದಾದ ತಪ್ಪನ್ನು ಸರಿಪಡಿಸಲು ದೈತ್ಯ ಐ.ಟಿ ಸಂಸ್ಥೆಗಳ ಪ್ರವರ್ತಕರು ನವೋದ್ಯಮಗಳಲ್ಲಿ ಬಂಡವಾಳ ತೊಡಗಿಸಲು ಮನಸ್ಸು ಮಾಡಿದ್ದಾರೆ. ಆದರೆ, ಸಾವಿರಾರು ಕೋಟಿಗಳ ಹೂಡಿಕೆ ಬಯಸುವ ಸ್ಮಾರ್ಟ್‌ ಸಾಧನಗಳ ತಯಾರಿಕೆ ಉದ್ದಿಮೆ ಆರಂಭಿಸುವುದು ಅಷ್ಟು ಸುಲಭದ ಕೆಲಸವಲ್ಲ.

ಇಂಟೆಲ್‌ನ ಮಾಜಿ ಉದ್ಯೋಗಿ ಮಹೇಶ್‌ ಲಿಂಗಾರೆಡ್ಡಿ ಅವರು ಅಂತಹ ಮಹತ್ವಾಕಾಂಕ್ಷೆಯ ಕನಸಿಗೆ ಕೈಹಾಕಿದ್ದಾರೆ. ದೇಶ – ವಿದೇಶಗಳ ಹೂಡಿಕೆದಾರರಿಗೆ ತಮ್ಮ ನವೋದ್ಯಮದ ಪರಿಕಲ್ಪನೆ ಪರಿಚಯಿಸಿ ಅವರಿಂದ ಅಪಾರ ಪ್ರಮಾಣದ ಬಂಡವಾಳ ಆಕರ್ಷಿಸಿ ಜಾಗತಿಕ ಬ್ರ್ಯಾಂಡ್‌ನ ಸ್ಮಾರ್ಟ್‌ ಡಿಜಿಟಲ್ ಸಾಧನಗಳ ತಯಾರಿಕೆಯತ್ತ ಗಮನ ಕೇಂದ್ರೀಕರಿಸಿದ್ದಾರೆ.

ಜಾಗತಿಕ ಮಟ್ಟದ ಆ್ಯಪಲ್‌, ಸ್ಯಾಮ್ಸಂಗ್‌ನಂತದಹ ದೇಶಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಾಧ್ಯವಿದೆ ಎಂದು ದೃಢವಾಗಿ ನಂಬಿರುವ ಮಹೇಶ್‌ ಅವರು ಈ ಕನಸು ನನಸಾಗಿಸಲು ಸ್ಮಾರ್ಟಾರ್ನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿದ್ದಾರೆ. ಬೆಂಗಳೂರು, ಹೈದರಾಬಾದ್‌ ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿರುವ ಸಂಸ್ಥೆ ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ವಹಿವಾಟು ವಿಸ್ತರಿಸಲು ಗಮನ ಕೇಂದ್ರೀಕರಿಸಿದೆ.

ಭಾರತದಲ್ಲಿ ಬಂಡವಾಳ ಹೂಡಿಕೆ ಸಮಸ್ಯೆ ಇದೆ. ಸ್ಮಾರ್ಟ್‌ ಸಾಧನಗಳ ತಯಾರಿಕೆಯ ನವೋದ್ಯಮ ಆರಂಭಿಸಲು ₹ 1,000 ಕೋಟಿಗಳಿಂದ ₹ 1,500 ಕೋಟಿಗಳಷ್ಟು ಬಂಡವಾಳ ಹೂಡಿಕೆಯ ಅಗತ್ಯ ಇದೆ. ಅಷ್ಟು ದೊಡ್ಡ ಮೊತ್ತ ಹೂಡಿಕೆಯನ್ನು ಕಾರ್ಯಗತಗೊಳಿಸುವುದು ಹೇಳಿದಷ್ಟು ಸುಲಭವೂ ಅಲ್ಲ. ದೇಶದ ಕೆಲ ಪ್ರಭಾವಿ ಉದ್ದಿಮೆ ಸಂಸ್ಥೆಗಳಿಗೆ ಇನ್ನೊಂದು ಸ್ಟಾರ್ಟ್‌ಅಪ್‌ ಯಶಸ್ವಿಯಾಗುವುದು, ತಮಗೆ ಪ್ರತಿಸ್ಪರ್ಧಿ ಸಂಸ್ಥೆ ಅಸ್ತಿತ್ವಕ್ಕೆ ಬರುವುದೂ ಬೇಕಾಗಿಲ್ಲ. ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುವ ಕಾರ್ಪೊರೇಟ್‌ ಸಂಸ್ಕೃತಿಯೇ ನಮ್ಮಲ್ಲಿ ಇಲ್ಲ. ಸರ್ಕಾರದ ಬಳಿಯೂ ಹಣ ಇಲ್ಲ.

ಹೀಗಾಗಿ ಖಾಸಗಿ ಬಂಡವಾಳ ಹೂಡಿಕೆದಾರರನ್ನೇ ನೆಚ್ಚಿಕೊಳ್ಳಬೇಕಾಗಿದೆ. ಈ ಕಾರಣಕ್ಕೆ ಮಹೇಶ್‌ ಅವರು ಅಮೆರಿಕ, ಅಬುಧಾಬಿ, ರಷ್ಯಾದ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ₹ 1,500 ಕೋಟಿಗಳಷ್ಟು ಬಂಡವಾಳ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದಾರೆ. ‘ಸಂಸ್ಥೆಯ ಹೊಸ ಉತ್ಪನ್ನಗಳ ವೈಶಿಷ್ಟ್ಯ, ವಹಿವಾಟಿನ ಯಶೋಗಾಥೆ, ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟರೆ, ಯಶಸ್ಸಿನ ಖಾತರಿ ನೀಡಿದರೆ ಹೂಡಿಕೆದಾರರು ಖಂಡಿತವಾಗಿಯೂ ಮುಂದೆ ಬರುತ್ತಾರೆ’ ಎಂದು ಅವರು ಹೇಳುತ್ತಾರೆ.

ಇಂಟೆಲ್‌ನಲ್ಲಿ ಕೆಲಸ ಮಾಡಿ ಹೊರ ಬಂದ ನಂತರ ಸ್ನೇಹಿತರ ಜತೆ ಸೇರಿ ಸ್ಥಾಪಿಸಿದ್ದ ಸಾಫ್ಟ್‌ಮಷೀನ್‌ ಸಂಸ್ಥೆಯನ್ನು ಇಂಟೆಲ್‌ಗೆ ಮಾರಾಟ ಮಾಡಿದ್ದರು. ಆನಂತರ ಸ್ವದೇಶಕ್ಕೆ ಮರಳಿ ಸ್ಮಾರ್ಟಾರ್ನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸ್ಥಾಪಿಸಿದ್ದಾರೆ.

ಸ್ಮಾರ್ಟಾರ್ನ್‌, ಆ್ಯಪಲ್‌ನಂತೆಯೇ ಕಾರ್ಯನಿರ್ವಹಿಸುತ್ತಿದೆ. ಡಿಜಿಟಲ್‌ ಸಾಧನಗಳ ತಯಾರಿಕಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಎಂಜಿನಿಯರಿಂಗ್‌, ಸಾಫ್ಟ್‌ವೇರ್‌, ಹಾರ್ಡ್‌ವೇರ್‌, ಉತ್ಪನ್ನದ ವಿನ್ಯಾಸದ ಪರಿಕಲ್ಪನೆ ಒದಗಿಸುತ್ತಿದೆ. ಚೀನಾದ ಮೊಬೈಲ್‌ ಸಂಸ್ಥೆಗಳು ಅಬ್ಬರದ ಪ್ರಚಾರಕ್ಕೆ ಮಾಡುವ ದುಂದು ವೆಚ್ಚಕ್ಕೆ ಹೋಲಿಸಿದರೆ ಸ್ಮಾರ್ಟಾರ್ನ್‌ ಮಾರುಕಟ್ಟೆ ತಂತ್ರ ಸಂಪೂರ್ಣ ಬೇರೆಯೇ ಆಗಿದೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್‌ ಮಾರಾಟ ಮಳಿಗೆ ಮೂಲಕವೇ ಮಾರಾಟ ಮಾಡಲಾಗುತ್ತಿದೆ.

‘ಎರಡು ವರ್ಷಗಳ ಅಸ್ತಿತ್ವಕ್ಕೆ ಬಂದ ಸಂಸ್ಥೆಯು ಒಂದು ವರ್ಷದಲ್ಲಿ ಮೂರು ಉತ್ಪನ್ನಗಳನ್ನು ಪರಿಚಯಿಸಿದೆ. ವಿಶ್ವದ ಜನಪ್ರಿಯ ದುಬಾರಿ ಫೋನ್‌ಗಳ ಸೌಲಭ್ಯಗಳನ್ನೆಲ್ಲ ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳನ್ನು ಸ್ಮಾರ್ಟಾರ್ನ್‌ ಬ್ರ್ಯಾಂಡ್‌ ಹೆಸರಿನಡಿ ಪರಿಚಯಿಸಲಾಗುತ್ತಿದೆ. ಸ್ಮಾರ್ಟಾರ್ನ್‌ ಟಿ ಫೋನ್‌ ಅವುಗಳಲ್ಲಿ ಒಂದಾಗಿದೆ. ಇತರ ಬ್ರ್ಯಾಂಡ್‌ನ ದುಬಾರಿ ಫೋನ್‌ಗಳಲ್ಲಿ ಸಿಗುವ ಸೌಲಭ್ಯಗಳನ್ನೇ ಅವುಗಳ ಅರ್ಧದಷ್ಟು ಬೆಲೆಗೆ ಒದಗಿಸುವುದು ಸ್ಮಾರ್ಟಾರ್ನ್‌ ವೈಶಿಷ್ಟ್ಯವಾಗಿದೆ. ₹ 14 ಸಾವಿರದಿಂದ ₹ 24 ಸಾವಿರದ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳು ಇಲ್ಲಿ ಲಭ್ಯ ಇರಲಿವೆ’ ಎಂದು ಮಹೇಶ್‌ ಹೇಳುತ್ತಾರೆ.

ಕ್ರಿಕೆಟ್‌ ಲೋಕದ ದಂತಕತೆಯಾಗಿರುವ ಸಚಿನ್ ತೆಂಡೂಲ್ಕರ್‌ ಅವರೂ ಈ ಸಂಸ್ಥೆಯ ಹೂಡಿಕೆದಾರರಲ್ಲಿ ಒಬ್ಬರಾಗಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. ‘ಸಚಿನ್‌ ಅವರು ಮೊದಲು ಹೂಡಿಕೆದಾರ. ಆನಂತರ ಪ್ರಚಾರ ರಾಯಭಾರಿ. ಉತ್ಪನ್ನ ಮಾರಾಟಕ್ಕೆ ಅವರನ್ನು ನೇರವಾಗಿ ಬಳಸಿಕೊಳ್ಳುವುದಿಲ್ಲ.
‘ಸ್ಯಾಮ್ಸಂಗ್‌ ಬಳಸುವವರು ಈಗ ಸ್ಮಾರ್ಟಾರ್ನ್‌ ಫೋನ್‌ಗಳನ್ನು ಬಳಸುತ್ತಿದ್ದಾರೆ.

ಜಾಹೀರಾತಿಗೆ ದುಬಾರಿ ವೆಚ್ಚ ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಅದಕ್ಕೆ ನಾವು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್‌ನಲ್ಲಿನ ಜನಪ್ರಿಯ ಮಳಿಗೆಗಳನ್ನು ನೆಚ್ಚಿಕೊಂಡಿದ್ದೇವೆ. ₹ 40 ಸಾವಿರಕ್ಕೆ ಸಿಗುವ ಜನಪ್ರಿಯ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಸೌಲಭ್ಯಗಳನ್ನೆಲ್ಲ ಒಳಗೊಂಡಿರುವ ಸ್ಮಾರ್ಟಾರ್ನ್‌ ಸ್ಮಾರ್ಟ್‌ಫೋನ್‌ ಅರ್ಧ ಬೆಲೆಗೆ ದೊರೆಯಲಿದೆ' ಎಂದು ಅವರು ಹೇಳುತ್ತಾರೆ.

ದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಸ್ಮಾರ್ಟ್‌ ಸಾಧನಗಳು ಜಾಗತಿಕ ಮಾರುಕಟ್ಟೆಯಲ್ಲಿನ ಇತರ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸ್ಪರ್ಧೆ ಒಡ್ಡಬೇಕು ಎನ್ನುವುದು ಈ ಸ್ಟಾರ್ಟ್‌ಅಪ್ ಸ್ಥಾಪಕರ ಆಶಯವಾಗಿದೆ. ಈ ನಿಟ್ಟಿನಲ್ಲಿ ಎದುರಾಗುವ ಹೊಸ ಮೂಲ ಸೌಕರ್ಯಗಳ ಸವಾಲುಗಳನ್ನೆಲ್ಲ ಮೆಟ್ಟಿ ನಿಲ್ಲಲು ಸಂಸ್ಥೆ ಪ್ರಯತ್ನ ಪಡುತ್ತಿದೆ.

ಇಂಟೆರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ಅಲೆಯ ನೆರವಿನಿಂದ ಹೊಸ, ಹೊಸ ಚುರುಕಿನ ಸಾಧನಗಳ ಸಂಶೋಧನೆಯಲ್ಲಿಯೂ ಸಂಸ್ಥೆ ತೊಡಗಿಕೊಂಡಿದೆ. ದಿನನಿತ್ಯದ ಬದುಕಿಗೆ ಹೊಸ ಭಾಷ್ಯ ಬರೆಯಲು ನೆರವಾಗುವ ವಿಶಿಷ್ಟ ಅನುಭವ ನೀಡುವ ಸ್ಮಾರ್ಟ್‌ ಸಾಧನಗಳ ತಯಾರಿಕೆಗೆ ಜಾಗತಿಕ ಹೂಡಿಕೆದಾರರೂ ಕೈಜೋಡಿಸಿದ್ದಾರೆ. ಸಂಶೋಧನೆ, ವಿನ್ಯಾಸ, ಎಂಜಿನಿಯರಿಂಗ್‌ ನೆರವಿನಿಂದ ಸ್ಮಾರ್ಟ್‌ ಸಾಧನ ತಯಾರಿಸಿ ಭಾರತದ ಪ್ರಥಮ ಜಾಗತಿಕ ಬ್ರ್ಯಾಂಡ್‌ ಆಗಿ ರೂಪುಗೊಳ್ಳುವುದು ಸಂಸ್ಥೆಯ ಪ್ರವರ್ತಕರ ಮುಖ್ಯ ಉದ್ದೇಶವಾಗಿದೆ. ‘ಇನ್ನೊಂದು ಐ.ಟಿ ಸೇವಾ ಸಂಸ್ಥೆಯಾಗಿ ಬೆಳೆಯುವುದು ನಮ್ಮ ಉದ್ದೇಶವಲ್ಲ. ನಮ್ಮ ಗ್ರಾಹಕರಿಗೆ ವಿಸ್ಮಯಕಾರಿ ಅನುಭವ ನೀಡುವಂತಹ ಸಾಧನ ತಯಾರಿಸುವುದೇ ನಮ್ಮ ಮಹದಾಸೆಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಹೇಶ್‌ ಹೇಳುತ್ತಾರೆ.

ಸಂಸ್ಥೆ ತಯಾರಿಸಿದ ₹ 42 ಸಾವಿರ ಬೆಲೆಯ ‘ಟಿ–ಬುಕ್‌’ಗೆ ಉತ್ತಮ ಬೇಡಿಕೆ ಕಂಡು ಬಂದಿದೆ. ‘ಟಿ–ಬುಕ್ 2’ ಕೂಡ ಮಾರುಕಟ್ಟೆಗೆ ಬರಲಿದೆ. ಒಂದು ಮಾದರಿಯ ಉತ್ಪನ್ನಕ್ಕೆ ಒಂದು ವರ್ಷದವರೆಗೆ ಒಂದೇ ಬೆಲೆ ಇರಲಿದೆ.ಮಾರ್ಚ್‌ ಅಂತ್ಯದ ಹೊತ್ತಿಗೆ 8 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಸ್ಥೆ ಉದ್ದೇಶಿಸಿದೆ. – ಸ್ಮಾರ್ಟ್‌ ವೇರೆಬಲ್‌ ಫಿಟ್‌ವಿಟ್‌– ₹ 7 ಸಾವಿರಕ್ಕೆ ಸಿಗಲಿದೆ.

‘ಟಿ–ಹೆಲ್ತ್‌’ ಉತ್ಪನ್ನವು ಆ್ಯಕ್ಟಿವ್‌ ಹೆಲ್ತ್‌ ಮ್ಯಾನೇಜ್‌ಮೆಂಟ್‌ ಸೌಲಭ್ಯ ಒದಗಿಸಲಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಇಂತಹ ಉತ್ಪನ್ನ ಪರಿಚಯಿಸಲಾಗುತ್ತಿದೆ. ಇದರಲ್ಲಿ ದಾಖಲಾಗುವ ವೈಯಕ್ತಿಕ ಆರೋಗ್ಯ ಮಾಹಿತಿಯನ್ನು ಮೊಬೈಲ್‌, ಲ್ಯಾಪ್‌ಟ್ಯಾ‍ಪ್‌, ಕಂಪ್ಯೂಟರ್‌ನಲ್ಲಿಯೂ ವೀಕ್ಷಿಸಬಹುದು.
ವಿದ್ಯುತ್‌ ಚಾಲಿತ ಬೈಸಿಕಲ್‌ – ಸಂಸ್ಥೆಯ ಇನ್ನೊಂದು ವಿಶಿಷ್ಟ ಉತ್ಪನ್ನವಾಗಿದೆ. ಇದೊಂದು ಬ್ಯಾಟರಿ ಚಾಲಿತ ಸೈಕಲ್‌. ಬೆಲೆ ₹ 40 ಸಾವಿರದವರೆಗೆ ಇರಲಿದೆ. ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸಲಿದೆ. ಇದನ್ನು ಚೆನ್ನೈನಲ್ಲಿ ತಯಾರಿಸಲಾಗುತ್ತಿದೆ.

ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ಗಳಲ್ಲದೆ ಸ್ವಯಂಚಾಲಿತವಾಗಿ ನಿರ್ವಹಿಸಬಹುದಾದ ಮನೆಯ ದೀಪಗಳು. ವ್ಯಕ್ತಿಯ ಮುಖ ಗುರುತಿಸಿ ಬಾಗಿಲು ತೆರೆಯುವ ಸೌಲಭ್ಯ ಒಳಗೊಂಡಿರುವ ಕ್ಯಾಮೆರಾ, ದೊಡ್ಡ ಕಚೇರಿಗಳ ವಿಶಾಲ ಪ್ರದೇಶದಲ್ಲಿ ಏಕರೂಪದ ಹವಾ ನಿಯಂತ್ರಣ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿಯೂ ಸ್ಮಾರ್ಟಾನ್‌ ಸಾಧನಗಳು ನೆರವಾಗುತ್ತಿವೆ. ಮಾರಾಟ ನಂತರದ ಸೇವೆಯನ್ನೂ ಸಂಸ್ಥೆ ಒದಗಿಸುತ್ತಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣದವರಾಗಿರುವ ಮಹೇಶ್‌ ಅವರು 1997ರಲ್ಲಿ ಎಂಬಿಎ ಪದವೀಧರರು. ಇಂಟೆಲ್‌ನಲ್ಲಿ 7 ವರ್ಷ ಕೆಲಸ ಮಾಡಿದ್ದಾರೆ. ಆನಂತರ ಸಹೋದ್ಯೋಗಿ ಜತೆ ಸೇರಿ ಚಿಪ್‌ ತಯಾರಿಕೆಯ ಸಾಫ್ಟ್‌ಮಷಿನ್‌ ಸಂಸ್ಥೆ ಸ್ಥಾಪಿಸಿದ್ದರು. ಕೆಲ ವರ್ಷಗಳ ನಂತರ ಇದನ್ನು ಇಂಟೆಲ್‌ಗೆ ಮಾರಾಟ ಮಾಡಿದ್ದರು. ಭಾರತಕ್ಕೆ ಮರಳಿ ಬಂದು ಸ್ಮಾರ್ಟಾರ್ನ್‌ ಸ್ಥಾಪಿಸಿದ್ದಾರೆ.

ಮುಂದಿನ 10 ವರ್ಷಗಳಲ್ಲಿ ವಿಶ್ವದಾದ್ಯಂತ ಸ್ಮಾರ್ಟಾನ್‌ ಉತ್ಪನ್ನಗಳನ್ನು ಪರಿಚಯಿಸಿ ಭಾರತದ ದೈತ್ಯ ಬಹುರಾಷ್ಟ್ರೀಯ ಸಂಸ್ಥೆಯಾಗಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯ ಪ್ರವರ್ತಕರು ಒಂದೊಂದೇ ದೃಢ ಹೆಜ್ಜೆ ಇರಿಸುತ್ತಿದ್ದಾರೆ.

ದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಸ್ಮಾರ್ಟ್‌ ಸಾಧನಗಳು ಜಾಗತಿಕ ಮಾರುಕಟ್ಟೆಯಲ್ಲಿನ ಇತರ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸ್ಪರ್ಧೆ ಒಡ್ಡಬೇಕು ಎನ್ನುವುದು ಈ ಸ್ಟಾರ್ಟ್‌ಅಪ್ ಸ್ಥಾಪಕರ ಆಶಯವಾಗಿದೆ. ಈ ನಿಟ್ಟಿನಲ್ಲಿ ಎದುರಾಗುವ ಹೊಸ ಮೂಲ ಸೌಕರ್ಯಗಳ ಸವಾಲುಗಳನ್ನೆಲ್ಲ ಮೆಟ್ಟಿ ನಿಲ್ಲಲು ಸಂಸ್ಥೆ ಪ್ರಯತ್ನ ಪಡುತ್ತಿದೆ.

ಇಂಟೆರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ಅಲೆಯ ನೆರವಿನಿಂದ ಹೊಸ, ಹೊಸ ಚುರುಕಿನ ಸಾಧನಗಳ ಸಂಶೋಧನೆಯಲ್ಲಿಯೂ ಸಂಸ್ಥೆ ತೊಡಗಿಕೊಂಡಿದೆ. ದಿನನಿತ್ಯದ ಬದುಕಿಗೆ ಹೊಸ ಭಾಷ್ಯ ಬರೆಯಲು ನೆರವಾಗುವ ವಿಶಿಷ್ಟ ಅನುಭವ ನೀಡುವ ಸ್ಮಾರ್ಟ್‌ ಸಾಧನಗಳ ತಯಾರಿಕೆಗೆ ಜಾಗತಿಕ ಹೂಡಿಕೆದಾರರೂ ಕೈಜೋಡಿಸಿದ್ದಾರೆ.

ಸಂಶೋಧನೆ, ವಿನ್ಯಾಸ, ಎಂಜಿನಿಯರಿಂಗ್‌ ನೆರವಿನಿಂದ ಸ್ಮಾರ್ಟ್‌ ಸಾಧನ ತಯಾರಿಸಿ ಭಾರತದ ಪ್ರಥಮ ಜಾಗತಿಕ ಬ್ರ್ಯಾಂಡ್‌ ಆಗಿ ರೂಪುಗೊಳ್ಳುವುದು ಸಂಸ್ಥೆಯ ಪ್ರವರ್ತಕರ ಮುಖ್ಯ ಉದ್ದೇಶವಾಗಿದೆ. ‘ಇನ್ನೊಂದು ಐ.ಟಿ ಸೇವಾ ಸಂಸ್ಥೆಯಾಗಿ ಬೆಳೆಯುವುದು ನಮ್ಮ ಉದ್ದೇಶವಲ್ಲ. ನಮ್ಮ ಗ್ರಾಹಕರಿಗೆ ವಿಸ್ಮಯಕಾರಿ ಅನುಭವ ನೀಡುವಂತಹ ಸಾಧನ ತಯಾರಿಸುವುದೇ ನಮ್ಮ ಮಹದಾಸೆಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಹೇಶ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT