ಬೆಂಗಳೂರು: ಅಮೃತ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯೂಬೇಟರ್ (ಟಿಬಿಐ) ಈ ವರ್ಷ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಗೆದ್ದ ಯೆಲ್ಲೊ ಮೆಸೆಂಜರ್, ಲಿಂಕ್ಸ್ ಸ್ಮಾರ್ಟ್ ಡಿಎನ್ಎ ಮತ್ತು ಬುಕ್ಮೈ ಡೈಮಂಡ್ ನವೋದ್ಯಮಗಳಲ್ಲಿ ಅಮೃತ ವಿಶ್ವವಿದ್ಯಾಪೀಠಂ ₹ 1.3 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಲಿದೆ.
‘ದೇಶದ ಅಭಿವೃದ್ಧಿಗೆ ನೆರವಾಗುವಂತಹ ಮತ್ತು ಆಧುನಿಕ ತಂತ್ರಜ್ಞಾನ ಪರಿಚಯಿಸುವ ನವೋದ್ಯಮಗಳ ಬಗ್ಗೆ ಈ ಸ್ಪರ್ಧೆಯಲ್ಲಿ ಹೆಚ್ಚು ಗಮನ ನೀಡಲಾಗಿತ್ತು’ ಎಂದು ಟಿಬಿಐನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಕೃಷ್ಣಶ್ರೀ ಅಚ್ಯುತನ್ ತಿಳಿಸಿದ್ದಾರೆ.
‘ಈ ವರ್ಷದ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಉತ್ತಮ ನವೋದ್ಯಮಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಈ ರೀತಿಯ ಸ್ಪರ್ಧೆಗಳು ನವೋದ್ಯಮಿಗಳಲ್ಲಿ ಸ್ಫೂರ್ತಿ ತುಂಬಲಿವೆ’ ಎಂದು ಸಂಸ್ಥೆಯ ಮುಖ್ಯ ನಿರ್ವಹಣಾ ಅಧಿಕಾರಿ ಸ್ನೇಹಲ್ ಶೆಟ್ಟಿ ಹೇಳಿದ್ದಾರೆ.
ದೇಶದ 22 ರಾಜ್ಯಗಳಿಂದ 800ಕ್ಕೂ ಹೆಚ್ಚು ನವೋದ್ಯಮಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಇಂಡಿಯನ್ ಏಂಜೆಲ್ ನೆಟ್ವರ್ಕ್ ಮತ್ತು ನೀತಿ ಆಯೋಗದ ಸಹಭಾಗಿತ್ವದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.