ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯಲಹರೀ ಮಹಾಸಮರ್ಪಣೆಗೆ ಕ್ಷಣಗಣನೆ

ಹಸಿರು, ಅರಿಷಿಣ, ಕುಂಕುಮ
Last Updated 29 ಅಕ್ಟೋಬರ್ 2017, 6:57 IST
ಅಕ್ಷರ ಗಾತ್ರ

ಬೆಂಗಳೂರು: ಯಡತೊರೆಮಠದ ವೇದಾಂತ ಭಾರತಿ ಸಂಸ್ಥೆಯು ಅರಮನೆ ಮೈದಾನದಲ್ಲಿ ಆಯೋಜಿಸಿರುವ "ಸೌಂದರ್ಯಲಹರೀ ಮಹಾಸಮರ್ಪಣೆ"ಗೆ ಕ್ಷಣಗಣನೆ ಆರಂಭವಾಗಿದೆ.

ದೂರದ ಊರುಗಳಿಂದ ಬಂದಿರುವ ಸಾವಿರಾರು ಮಹಿಳೆಯರು ಮತ್ತು ಕಾರ್ಯಕರ್ತರು ಬಸ್ಸುಗಳಿಂದ ಇಳಿದು ಶಾಮಿಯಾನದೆಡೆಗೆ ಧಾವಿಸುತ್ತಿದ್ದಾರೆ. ಬಹುತೇಕ ಮಹಿಳೆಯರು ಹಸಿರು ಬಣ್ಣದ ಸಿಲ್ಕ್ ಸೀರೆ ಉಟ್ಟಿರುವುದು ವಿಶೇಷ. ಅರಿಷಣ, ಕುಂಕುಮ ಕೆಂಪು, ಗಾಢ ನೀಲಿ ಬಣ್ಣದ ಸೀರೆಗಳಿಗೆ ನಂತರದ ಸ್ಥಾನ.

"ಅದಮ್ಯ ಚೇತನ"ದ ವತಿಯಿಂದ ಶುಚಿ-ರುಚಿಯಾದ ಸಿಹಿಯೂಟ, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಿಹಿಪೊಂಗಲ್, ಬಿಸಿಬೇಳೆಬಾತ್ ಮತ್ತು ಮೊಸರನ್ನಗಳನ್ನು ಅಡಿಕೆ ತಟ್ಟೆಗಳಲ್ಲಿ ವಿತರಿಸಲಾಗುತ್ತಿದೆ.

ಮಹಿಳೆಯರು ಪ್ರಸಾದ ಸ್ವೀಕರಿಸಿದ ನಂತರವೇ ಪಾರಾಯಣ ಮಂಟಪದ ಒಳಗೆ ಪ್ರವೇಶಿಸುತ್ತಿದ್ದಾರೆ. ಹೀಗೆ ಪ್ರವೇಶಿಸುವ ಮೊದಲು ಮೊಬೈಲ್‌ಗಳನ್ನೇ ನೋಡಿಕೊಂಡು ಹೆರಳು ಸರಿಪಡಿಸಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ಭಜನಾ ಮಂಡಳಿಗಳ ಸದಸ್ಯೆಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಪತಿಯೊಡನೆ ಮಗುವನ್ನು ಕರೆತಂದಿರುವ ಕೆಲ ಮಹಿಳೆಯರು ಮಕ್ಕಳನ್ನು ಪತಿಯ ಸುಪರ್ದಿಗೆ ಒಪ್ಪಿಸಿ ಪಾರಾಯಣಕ್ಕೆ ತೆರಳಿದರು. "ನೀನು ಹೋಗಿ ಬಾ, ಮಗುವನ್ನು ನಾನು ಸುಧಾರಿಸ್ತೀನಿ. ಬಸ್ಸಿನ ಹತ್ರ ಇರ್ತೀನಿ. ಅಲ್ಲಿಗೇ ಬಂದುಬಿಡು" ಎಂದು ಪತಿರಾಯನೊಬ್ಬ ಪತ್ನಿಯನ್ನು ಬೀಳ್ಕೊಟ್ಟ ದೃಶ್ಯ ಕಂಡುಬಂತು.

ಹೆರಳಿಗೆ ಮಲ್ಲಿಗೆ: ಬಹುತೇಕರು ಸಡಿಲ ಹೆರಳು ಹಾಕಿ, ಮಲ್ಲಿಗೆ ಮುಡಿದಿದ್ದಾರೆ. ಮಾಗಿದ ಅನುಭವ ಬಿಂಬಿಸುವಂತಿರುವ ಕೆಲ ಹಿರಿಯರ ಬಿಳಿಗೂದಲಿನಲ್ಲಿ ಕನಕಾಂಬರ ನಗುತಿದೆ. ಉಳಿದಂತೆ ನೀಲಿ ಸ್ಫಟಿಕ, ಹಳದಿ ಸೇವಂತಿಯೂ ಕೆಲವರ ತಲೆಏರಿ ನಗುತಿದೆ.

ವೇದಾಂತ ಸಾಹಿತ್ಯ: ವೇದಾಂತ ಭಾರತಿ ಪ್ರಕಟಣೆಯ ತತ್ವಶಾಸ್ತ್ರದ ಪುಸ್ತಕಗಳು ಮತ್ತು ಇಸ್ಕಾನ್ ಪ್ರಕಟಣೆಯ ಧಾರ್ಮಿಕ ಪುಸ್ತಕಗಳನ್ನು ಆಸಕ್ತರು ಕುತೂಹಲದಿಂದ ಗಮನಿಸುತ್ತಿದ್ದಾರೆ. ಸಂಸ್ಥೆಗಳ ಪ್ರತಿನಿಧಿಗಳು ಆಸಕ್ತರಿಗೆ ಆಸ್ಥೆಯಿಂದ ಲೇಖಕರು ಮತ್ತು ಶಾಸ್ತ್ರಗ್ರಂಥಗಳ ಪ್ರಾಮುಖ್ಯತೆ ವಿವರಿಸುತ್ತಿದ್ದಾರೆ.

ಅಚ್ಚುಕಟ್ಟು ವ್ಯವಸ್ಥೆ: ಆಹಾರ ವಿತರಣೆ, ಬಳಸಿದ ಅಡಿಕೆ ತಟ್ಟೆ ಮತ್ತು ಚಮಚಗಳ ಸಂಗ್ರಹ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಅಚ್ವುಕಟ್ಟಾಗಿದೆ. ಚಪ್ಪಲಿ ಇರಿಸಲು ಎರಡೂ ಮೂಲೆಗಳಲ್ಲಿ ದೊಡ್ಡ ಕೌಂಟರ್‌ಗಳನ್ನು ತೆರೆಯಲಾಗಿದೆ. ಸ್ವಚ್ಛತೆ ಕಾಪಾಡುವಂತೆ ಮೈಕುಗಳ ಮೂಲಕ ಪದೇಪದೇ ವಿನಂತಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT