ಶಿವಮೊಗ್ಗ: ಸವಳಂಗ ರಸ್ತೆ ದರಸ್ತಿಗೊಳಿಸಬೇಕು. ಇರುವ ಗುಂಡಿಗಳನ್ನು ತಕ್ಷಣ ಮುಚ್ಚಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಜವಾಹರಲಾಲ್ ನೆಹರು ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜು ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ರಸ್ತೆಯ ಹಲವೆಡೆ ಗುಂಡಿಗಳು ನಿರ್ಮಾಣವಾಗಿವೆ. ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈಚೆಗೆ ನಡೆದ ಅಪಘಾತದಲ್ಲಿ ವಿನಯ್ ಕುಮಾರ್ ಮೃತಪಟ್ಟಿದ್ದಾರೆ. ಇದಕ್ಕೆ ಗುತ್ತಿಗೆದಾರರು, ಅಧಿಕಾರಿಗಳೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿ ಕಾಮಗಾರಿಗೆ ಬಳಸಲು ರಸ್ತೆಯಲ್ಲೇ ಜಲ್ಲಿ ಮತ್ತು ಮರಳಿನ ರಾಶಿ ಹಾಕಲಾಗಿದೆ. ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ರಾತ್ರಿ ಸಮಯದಲ್ಲಿ ವಾಹನಗಳಿಗೆ ಅನುಕೂಲವಾಗಲು ರೇಡಿಯಂ ಫಲಕ ಅಳವಡಿಸಿಲ್ಲ. ಜೆಎನ್ಎನ್ಸಿಇ ವಲಯದಲ್ಲಿ ವಾಹನಗಳ ವೇಗ ತಗ್ಗಿಸಲು ಬ್ಯಾರಿಕೇಡ್ ಅಥವಾ ಹಂಪ್ಸ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಮುಖಂಡರಾದ ಸಚಿನ್ ರಾಯ್ಕರ್, ಅಭಿಷೇಕ್, ಶರತ್, ಪವನ್, ಜಾಧವ್, ನಿರಂಜನ್, ಕಾರ್ತಿಕ್, ಸಂದೀಪ್, ಪ್ರಧಾನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.