ಬೆಂಗಳೂರು : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಆಪ್ತ ಸಹಾಯಕ, ಕಿಡ್ನ್ಯಾಪ್ ಪ್ರಕರಣದ ಪ್ರಮುಖ ಆರೋಪಿ ಸಂತೋಷ್, ವಿಐಪಿ ಪಾಸ್ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿರುವ ವಿಡಿಯೊ ಈಗ ಚರ್ಚೆಗೆ ಗ್ರಾಸವಾಗಿದೆ.
ಭಾನುವಾರ ಬೆಂಗಳೂರಿಗೆ ಆಗಮಿಸಿದ್ದ ಮೋದಿ ವಿಶೇಷ ವಿಮಾನದಲ್ಲಿ ಇಲ್ಲಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ಸಮಯದಲ್ಲಿ ಅವರಿಗೆ ಸ್ವಾಗತ ಕೋರಲು ಆಯ್ದ ಪ್ರಮುಖರಿಗೆ ಮಾತ್ರ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ವಿಐಪಿ ಪಾಸ್ ನೀಡಲಾಗಿತ್ತು. ಭದ್ರತೆ ದೃಷ್ಟಿಯಿಂದ ಎಲ್ಲರಿಗೂ ಅವಕಾಶ ನೀಡಿರಲಿಲ್ಲ.
ಆರೋಪಿ ಸ್ಥಾನದಲ್ಲಿರುವ ಸಂತೋಷ್ಗೆ ವಿಐಪಿ ಪಾಸ್ ನೀಡಿದ್ದು ಏಕೆ ಎಂಬ ಚರ್ಚೆ ಬಿಜೆಪಿಯೊಳಗೆ ನಡೆಯುತ್ತಿದೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕ, ಬಿಜೆಪಿ ಕಾರ್ಯಕರ್ತ ವಿನಯ್ ಅಪಹರಣ ಪ್ರಕರಣದಲ್ಲಿ ಸಂತೋಷ್ ಆರೋಪಿಯಾಗಿದ್ದಾರೆ. ಇವರ ಸೂಚನೆ ಮೇರೆಗೆ ರೌಡಿ ಶೀಟರ್ ಪ್ರಶಾಂತ್ ತನ್ನ ಸಹಚರರ ಜತೆ ಸೇರಿಕೊಂಡು ವಿನಯ್ ಅಪಹರಣಕ್ಕೆ ಯತ್ನಿಸಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.