ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಯೋಗೀಶ್‌–ಸಾಹಿತ್ಯ

Last Updated 2 ನವೆಂಬರ್ 2017, 12:42 IST
ಅಕ್ಷರ ಗಾತ್ರ

ನಟ ಯೋಗೀಶ್‌ ಗುರುವಾರ ಸಾಹಿತ್ಯ ಅವರಿಗೆ ಮಾಂಗಲ್ಯ ಧಾರಣೆ ಮಾಡುವುದರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬನಶಂಕರಿ ಸಮೀಪದ ಚನ್ನಸಂದ್ರದಲ್ಲಿರುವ ಕನ್ವೆನ್‌ಶನ್‌ ಹಾಲ್‌ನಲ್ಲಿ ಕುರುಬ ಮತ್ತು ಬ್ರಾಹ್ಮಣ ಸಂಪ್ರದಾಯದಂತೆ ಇವರ ವಿವಾಹ ನೆರವೇರಿತು.

ನಿನ್ನೆ ಸಂಜೆಯೇ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಯೋಗೀಶ್‌ ಕುಟುಂಬದವರು ಬೆಳಿಗ್ಗೆ ನಾಲ್ಕು ಗಂಟೆಯವರೆಗೂ ವಿವಿಧ ಬಗೆಯ ವಿವಾಹಪೂರ್ವ ಶಾಸ್ತ್ರಗಳನ್ನು ಪೂರೈಸಿದರು. ಬೆಳಿಗ್ಗೆ ಆರು ಗಂಟೆಯ ಮುಹೂರ್ತದಲ್ಲಿ ಸಾಹಿತ್ಯ ಮತ್ತು ಯೋಗೀಶ್‌ ಸತಿ–ಪತಿಗಳಾದರು. ಯೋಗೀಶ್ ಅವರ ಮನೆಯಲ್ಲಿ ವಧುವನ್ನು ಮನೆಗೆ ತುಂಬಿಸಿಕೊಳ್ಳಲಾಯಿತು.

ಕಾಶಿ ಯಾತ್ರೆ, ಗೌರಿ ಪೂಜೆ, ಜೀರಿಗೆ ಬೆಲ್ಲ, ಕನ್ಯಾದಾನ, ಹಾಲಿನ ಧಾರೆ, ಸೂರ್ಯ ಪೂಜೆ, ಅರುಂದತಿ ದರ್ಶನ, ನಾಗೋಲಿ ಶಾಸ್ತ್ರಗಳು, ತೊಟ್ಟಿಲು ತೂಗುವ ಶಾಸ್ತ್ರ, ಹೂವಿನ ಚಂಡಾಟ, ಹಾಲಿನಲ್ಲಿ ಉಂಗುರ ಹುಡುಕುವುದು, ವಧುವಿಗೆ ಮಡಿಲಕ್ಕಿ ತುಂಬಿ ಆರತಿ ಮಾಡುವುದು ಹೀಗೆ ಹಲವಾರು ಶಾಸ್ತ್ರಗಳು ದಿನದುದ್ದಕ್ಕೂ ನಡೆದವು.

ಸಂಜೆ ಆರು ಗಂಟೆಗೆ ಇದೇ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರೆಲ್ಲರೂ ಹಾಜರಿದ್ದು ಹೊಸ ದಂಪತಿಗಳಿಗೆ ಶುಭ ಹಾರೈಸಿದರು. ನಟ ಶಿವರಾಜ್‌ ಕುಮಾರ್‌ ಮಾತ್ರ ಬೆಳಿಗ್ಗೆಯೇ ಕಲ್ಯಾಣ ಮಂಟಪಕ್ಕೆ ತೆರಳಿ ಯೋಗೀಶ್‌ ಮತ್ತು ಸಾಹಿತ್ಯ ಅವರಿಗೆ ಶುಭ ಹಾರೈಸಿದರು.

ಜೂನ್ 11ರಂದು ಬೆಂಗಳೂರಿನ ಯಡಿಯೂರಿನಲ್ಲಿರುವ ಸಾಹಿತ್ಯ ಮನೆಯಲ್ಲಿ ಸರಳವಾಗಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಹದಿಮೂರು ವರ್ಷಗಳಿಂದ ಸ್ನೇಹಿತರಾಗಿದ್ದ ಇವರು, ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಹಿತ್ಯ ಐಟಿ ಕಂಪೆನಿಯೊಂದರ ಉದ್ಯೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT