ಬಾಗಲಕೋಟೆ: ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವಿರೋಧಿಸಿ, ಶಾಸಕ ವಿಜಯಾನಂದ ಕಾಶಪ್ಪನವರ ಸಮ್ಮುಖದಲ್ಲಿಯೇ ಯುವಕನೊಬ್ಬ ಶನಿವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹುನಗುಂದ ತಾಲ್ಲೂಕಿನ ಹುಲ್ಲಳ್ಳಿ ಗ್ರಾಮದ ಶಂಕರಪ್ಪ ಗೋನಾಳ (23) ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಸ್ಮಶಾನಕ್ಕಾಗಿ ಈಗ ಗುರುತಿಸಿರುವ ಜಾಗ ತನ್ನ ಮನೆಯ ಪಕ್ಕದಲ್ಲಿಯೇ ಇದೆ. ಹಾಗಾಗಿ ಬೇರೆ ಕಡೆ ಜಾಗ ನಿಗದಿಗೊಳಿಸಬೇಕು ಎಂದು ಶಾಸಕರ ಎದುರು ಅಲವತ್ತುಕೊಂಡ ಶಂಕರಪ್ಪ, ಅವರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಸ್ವಸ್ಥ ಯುವಕನನ್ನು ಹುನಗುಂದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾಗಿ ಹುನಗುಂದ ತಾಲ್ಲೂಕು ವೈದ್ಯಾಧಿಕಾರಿ ಡಾ.ಕುಸುಮಾ ಮಾಗಿ ‘ಪ್ರಜಾವಾಣಿ’ಗೆ ತಿಳಿಸಿದರು.