ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: 7ರಂದು ಗಣಪತಿ ರಥೋತ್ಸವ

Last Updated 5 ನವೆಂಬರ್ 2017, 7:23 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ನ. 7ರಂದು ನಡೆಯಲಿದ್ದು, ಸಿದ್ಧತಾ ಕಾರ್ಯ ನಡೆಯಲಿದೆ. ಸ್ಥಳೀಯ ಗಣಪತಿ ದೇವಸ್ಥಾನ ಸೇವಾ ಸಮಿತಿಯಿಂದ ಮಧ್ಯಾಹ್ನ 12ಕ್ಕೆ ರಥೋತ್ಸವ ಜರುಗಲಿದೆ. ಇದರ ಅಂಗವಾಗಿ ದೇವಾಲಯದಲ್ಲಿ 9 ದಿನಗಳ ಕಾಲ ಬೆಳಿಗ್ಗೆ ಮತ್ತು ರಾತ್ರಿ 8ಕ್ಕೆ ಪಂಚಾಮೃತ ಅಭಿಷೇಕ, ಅರ್ಚನೆ, ನೈವೇದ್ಯಗಳೊಂದಿಗೆ ವಿವಿಧ ಪೂಜೆಗಳು ನಡೆಯಲಿವೆ.

ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಮತ್ತು ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ ರಾವ್ ಹಾಗೂ ಖಜಾಂಜಿ ಎಂ.ಕೆ.ದಿನೇಶ್ ನೇತೃತ್ವದಲ್ಲಿ ಸಮಿತಿ ಸದಸ್ಯರು ರಥೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದು ಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆಯಲಿವೆ. ನ. 5ರಂದು ಮೂಷಿಕ ವಾಹನ ಉತ್ಸವ, 6ರಂದು ಚಂದ್ರಬಿಂಬೋತ್ಸವ, 7ರಂದು ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ, 8ರಂದು ಮಂಟಪೋತ್ಸವ, 9ರಂದು ಹೂವಿನ ಪಲ್ಲಕ್ಕಿ ಮಂಟಪೋತ್ಸವ, 10ರಂದು ಅಂದೋಲಿಕೋತ್ಸವ, 11ರಂದು ತೆಪ್ಪೋತ್ಸವ (ಕಾವೇರಿ ನದಿಯಲ್ಲಿ), 12ರಂದು ತೀರ್ಥಸ್ಥಾನ, ರಾತ್ರಿ ಮಹಾಮಂಗಳಾರತಿ ಜರುಗಲಿವೆ. ನ. 8ರಿಂದ 12ವರೆಗೆ ಸಂಜೆ 7ರಿಂದ 8.30ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರುಗಲಿವೆ.

ಗಣಪತಿ ದೇವಾಲಯದಲ್ಲಿ ಅನೇಕ ಶತಮಾನಗಳಿಂದ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಈ ಜಾತ್ರೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನರು ಸೇರಿದಂತೆ ಜಿಲ್ಲೆಯ ಸಾವಿರಾರು ಜನರು ಪಾಲ್ಗೊಳ್ಳವರು.

ರಥೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಪಟ್ಟಣ ಪಂಚಾಯಿತಿ ಪಟ್ಟಣವನ್ನು ಶುಚಿಗೊಳಿಸುವ ಕಾರ್ಯ ಮಾಡಿದೆ.
ರಥೋತ್ಸವದ ಅಂಗವಾಗಿ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ನಿರ್ಮಿಸಲಾಗುವ ಸಾಂಸ್ಕೃತಿಕ ವೇದಿಕೆಯಲ್ಲಿ ನ. 8ರಿಂದ 18ರವರೆಗೆ ರಾತ್ರಿ 7ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೆಳಿಗ್ಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ವಾರ್ಷಿಕ ರಥೋತ್ಸವದ ಅಂಗವಾಗಿ 97ನೇ ಗೋಪ್ರದರ್ಶನ ಮತ್ತು ಜಾತ್ರೆ ಗುಂಡೂರಾವ್ ಜಾತ್ರಾ ಮೈದಾನದ ಆವರಣದಲ್ಲಿ ನಡೆಯಲಿದೆ. ಉತ್ತಮ ರಾಸುಗಳ ಆಯ್ಕೆ 17ರಂದು ನಡೆಯಲಿದೆ. ವಿಜೇತ ರಾಸುಗಳ ಮಾಲೀಕರಿಗೆ 19 ರಂದು ನಡೆಯಲಿರುವ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.
ಪ್ರತಿ ವರ್ಷ ರಥದ ಮುಂದೆ ಈಡುಗಾಯಿ ಒಡೆಯುವವರು ರಥದ ಮುಂದೆ ಹರಕೆಯ ಈಡೇರಿಕೆಗಾಗಿ 5 ಕಾಯಿಗಳನ್ನು ಮಾತ್ರ ಒಡೆದು, ಉಳಿದ ಕಾಯಿಗಳ ಹಣವನ್ನು ದೇವಾಲಯದ ಅಭಿವೃದ್ಧಿ ನಿಧಿಗೆ ನೀಡಬೇಕಾಗಿ ದೇವಸ್ಥಾನ ಸಮಿತಿ ಮನವಿ ಮಾಡಿದೆ.

ಸಮಿತಿಯ ಉಪಾಧ್ಯಕ್ಷ ಆರ್.ಬಾಬು ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸರಾವ್, ಸಹಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಜಿ ಎಂ.ಕೆ.ದಿನೇಶ್, ನಿರ್ದೇಶಕರಾದ ಎಸ್.ಎನ್.ನರಸಿಂಹಮೂರ್ತಿ, ವಿ.ಪಿ.ಶಶಿಧರ್, ಜಿ.ಎಲ್.ನಾಗರಾಜು, ಎಂ.ವಿ.ನಾರಾಯಣ್, ಟಿ.ಆರ್.ಶರವಣ ಕುಮಾರ್, ವಿ.ಡಿ.ಪುಂಡರೀಕಾಕ್ಷ, ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ್ಣ, ವೈ.ಆರ್.ನಾಗೇಂದ್ರ, ಡಿ.ಸಿ.ಜಗದೀಶ್, ಕೆ.ಎನ್.ಸುರೇಶ್, ಕೆ.ಸಿ.ನಂಜುಂಡಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನ್ನಸಂತರ್ಪಣಾ ಸಮಿತಿಯಿಂದ ಗಾಯಿತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ.

ರಘು ಹೆಬ್ಬಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT