ರಾಮನಗರ: ಇಲ್ಲಿನ ರಾಮದೇವರ ಬೆಟ್ಟಕ್ಕೆ ಹೋಗುವ ಪ್ರವೇಶ ದ್ವಾರದಲ್ಲಿ ಆಂಜನೇಯ ಸ್ವಾಮಿಯ ಬೃಹತ್ ಪ್ರತಿಮೆಯುಳ್ಳ ಹೆಬ್ಬಾಗಿಲಿನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಹನುಮ ಜಯಂತಿಯಂದು ಉದ್ಘಾಟನೆಗೆ ಸಜ್ಜಾಗುತ್ತಿದೆ.
ಈ ಹೆಬ್ಬಾಗಿಲಿನ ಬಳಿಯೇ ಅಭಯ ಆಂಜನೇಯ ಸ್ವಾಮಿಯ ದೇವಸ್ಥಾನವೂ ನಿರ್ಮಾಣಗೊಳ್ಳುತ್ತಿದೆ. ಅಭಯ ಆಂಜನೇಯ ಸ್ವಾಮಿ ಸೇವಾ ಸಮಿತಿಯು ಇದರ ನಿರ್ಮಾಣದ ಉಸ್ತುವಾರಿ ಹೊತ್ತಿದೆ. ಬೃಹತ್ ಗಾತ್ರದ ಆಂಜನೇಯನ ಮೂರ್ತಿಯು ಬೆಟ್ಟದ ಹಾದಿಗೆ ಕಶಸವಿಟ್ಟಂತೆ ಇದ್ದು, ಸುಂದರವಾಗಿ ಮೂಡಿಬಂದಿದೆ.
ಮಹಾದ್ವಾರವು ಸುಮಾರು 60 ಅಡಿ ಎತ್ತರವಿದ್ದು, ಅದರಲ್ಲಿ 35 ಅಡಿ ಎತ್ತರದ ಅಭಯ ಆಂಜನೇಯನನ್ನು ಪ್ರತಿಷ್ಠಾಪಿಸಲಾಗಿದೆ. 25 ಚದರ ಅಡಿ ವಿಸ್ತೀರ್ಣದಲ್ಲಿ ಸಭಾಮಂಟಪವು ನಿರ್ಮಾಣಗೊಂಡಿದೆ. ಇದಕ್ಕಾಗಿ ದೇವಸ್ಥಾನದ ಸಮಿತಿಯು ಭಕ್ತರ ನೆರವಿನೊಂದಿಗೆ ₹60 ಲಕ್ಷ ವ್ಯಯಿಸುತ್ತಿದೆ.
ಮೂರ್ತಿ ಹಾಗೂ ದೇವಸ್ಥಾನದ ಉದ್ಘಾಟನೆ ಅಂಗವಾಗಿ ಇದೇ 27ರಿಂದ ಡಿಸೆಂಬರ್ 1ರವರೆಗೆ ಐದು ದಿನ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಡಿ.1ರಂದು ಆಂಜನೇಯನ ಭವ್ಯ ಪ್ರತಿಮೆ ಅನಾವರಣಗೊಳ್ಳಲಿದೆ.