ಔರಾದ್: ‘ರೇಷ್ಮೆ ಬೆಳೆಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ನೀಡಲಾಗುವುದು’ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ತಿಳಿಸಿದರು. ತಾಲ್ಲೂಕಿನ ಭಂಡಾರಕುಮುಟಾ ಗ್ರಾಮದಲ್ಲಿ ಭಾನುವಾರ ರೇಷ್ಮೆ ಬೆಳೆಗಾರರ ಜತೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
ಈ ತಾಲ್ಲೂಕಿನಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದರೂ ರೇಷ್ಮೆ ಬೆಳೆಯುವಲ್ಲಿ ಮುಂದಿದೆ. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ರೇಷ್ಮೆ ಉತ್ಪಾದಿಸುವಂತೆ ಅವರು ಸಲಹೆ ನೀಡಿದರು.
ರೇಷ್ಮೆ ಮಾರುಕಟ್ಟೆ ವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರೈತರಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ನೂಲು ತೆಗೆಯುವ ಯಂತ್ರ ಒದಗಿಸಲಾಗುವುದು. ಅದಕ್ಕೆ ಶೇ 60 ರಷ್ಟು ಸಹಾಯಧನ ನೀಡಲಾಗುವುದು’ ಎಂದು ಹೇಳಿದರು. ಸಂವಾದದ ನಂತರ ರೇಷ್ಮೆ ಮಂಡಳಿ ಅಧ್ಯಕ್ಷರು ರೈತ ಜಾಕೀರ್ ಪಟೇಲ್ ಅವರ ಹೊಲಕ್ಕೆ ಭೇಟಿ ನೀಡಿ ರೇಷ್ಮೆ ಗೂಡು ವೀಕ್ಷಣೆ ಮಾಡಿದರು.
ರೇಷ್ಮೆ ವಿಜ್ಞಾನಿ ಡಾ. ಸತ್ಯನಾರಾಯಣ, ಎಂ.ಆರ್. ಇಟಗಿ, ಡಾ.ಜವಳಿ, ವಿಶೇಷ ಅಧಿಕಾರಿ ಮುಕುಂದ ಕ್ರಿಸೂರ್, ರೇಷ್ಮೆ ಸಹಾಯಕ ನಿರ್ದೇಶಕ ಭೀಮೇಶ್, ಪ್ರಗತಿಪರ ರೈತ ತೇಜರಾವ ಮುಳೆ, ಜಾಕೀರ್ ಪಟೇಲ್, ಉಮಾಕಾಂತ ಸ್ವಾಮಿ, ವಿಠಲ್ ಜೀರ್ಗೆ, ಮುಕುಂದ ರಾಠೋಡ ಇದ್ದರು.