ದಾವಣಗೆರೆ: ‘ವೀರಶೈವ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗೆ ಬಸವಣ್ಣ ಒಳ್ಳೆಯ ಬುದ್ಧಿ ಕೊಡಲಿ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಸವಣ್ಣನನ್ನು ಆರಾಧಿಸುವವರ ಬಾಯಲ್ಲಿ ಅವಾಚ್ಯ ಪದಗಳು ಬರಬಾರದಿತ್ತು. ಬಸವಣ್ಣ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದರೆ, ಶ್ರೀಗಳು ಜಾತಿ–ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಧರ್ಮ ಸಾಂವಿಧಾನಿಕ ಬೃಹತ್ ಸಮಾವೇಶದಲ್ಲಿ 5 ಲಕ್ಷ ಜನರನ್ನು ಸೇರಿಸುವುದಾಗಿ ಹೇಳಿದ್ದರು. ಅಲ್ಲಿ 50,000 ಮಂದಿಯೂ ಸೇರಿರಲಿಲ್ಲ. ಶ್ರೀಗಳಿಗೆ ದುಡ್ಡಿನ ಅಹಂಕಾರ ತಲೆಗೇರಿದೆ. ಮಾತೆ ಮಹಾದೇವಿ ಅವರೂ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ಇವರನ್ನು ದೇವರೇ ಕಾಪಾಡಬೇಕು’ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಎ.ಸಿ.ಜಯಣ್ಣ ಮಾತನಾಡಿ, ‘ಕೂಡಲಸಂಗಮ ಶ್ರೀಗಳು ವೀರಶೈವರ ಬಗ್ಗೆ ಹದ್ದುಮೀರಿ ಮಾತನಾಡಿದ್ದಾರೆ. ಇಂಥವರನ್ನು ಕಾವಿ ಬಟ್ಟೆ ಬಿಚ್ಚಿಸಿ ಓಡಿಸಬೇಕು’ ಎಂದರು.