ಭಟ್ಕಳ: ‘ಭಟ್ಕಳ–ಹೊನ್ನಾವರ ಕ್ಷೇತ್ರದ ಅಭಿವೃದ್ಧಿಗಾಗಿ ₹ 1 ಸಾವಿರ ಕೋಟಿ ತಂದಿದ್ದೇನೆ ಎಂದು ಶಾಸಕ ಮಂಕಾಳ ವೈದ್ಯ ಸುಳ್ಳು ಹೇಳಿ, ಜನರನ್ನು ಮರಳು ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಜೆ.ಡಿ.ನಾಯ್ಕ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾವಿರ ಕೋಟಿ ಹಣವನ್ನು ಎಲ್ಲೆಲ್ಲಿ ವಿನಿಯೋಗಿಸಿದ್ದಾರೆ ಎನ್ನುವುದರ ಕುರಿತು ಕಾಮಗಾರಿಯ ಕ್ರಿಯಾಯೋಜನೆ ಹಾಗೂ ದಾಖಲೆಗಳನ್ನು ಶಾಸಕರು ನೀಡಬೇಕು ಅಥವಾ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ಬಹಿರಂಗಪಡಿಸಲಿ. ಅಷ್ಟೊಂದು ಹಣ ತಂದಿದ್ದರೆ, ನಾವು ಅವರಿಗಾಗಿ ಅಭಿನಂದನೆಯ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕುತ್ತೇವೆ’ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿ, ‘ಶಾಸಕರು ಸ್ವಯಂ ಘೋಷಣೆ ಮಾಡಿಕೊಂಡಷ್ಟೇ ಅನುದಾನ ಕ್ಷೇತ್ರಕ್ಕೆ ಬಂದಿದ್ದರೆ, ಭಟ್ಕಳ ಇಷ್ಟರಲ್ಲಿಯೇ ಸಿಂಗಪುರ ಆಗುತ್ತಿತ್ತು’ ಎಂದರು.
ಪ್ರಮುಖರಾದ ಗೋವಿಂದ ನಾಯ್ಕ, ಸುನೀಲ್ ನಾಯ್ಕ, ಪರಮೇಶ್ವರ ದೇವಾಡಿಗ, ಕೃಷ್ಣ ನಾಯ್ಕ, ಭಾಸ್ಕರ ಮೊಗೇರ, ಸುಬ್ರಾಯ ದೇವಾಡಿಗ ಹಾಗೂ ಮಂಜು ನಾಯ್ಕ ಇದ್ದರು.