ತುರುವೇಕೆರೆ: ‘ಏಡು ಕೊಂಡಲವಾಡ ಗೋವಿಂದ ಗೋವಿಂದಾ, ನಮ್ಮೆಲ್ಲರ ಜಗದೊಡೆಯ ಗೋವಿಂದ ಗೋವಿಂದಾ' ಎನ್ನುತ ತಿರುಪತಿ ಶ್ರೀನಿವಾಸನ ನಾಮಸ್ಮರಣೆ ಪಟ್ಟಣದ ಕೆ.ಹಿರಣಯ್ಯ ಬಯಲು ರಂಗ ಮಂದಿರದಲ್ಲಿ ಶನಿವಾರ ರಾತ್ರಿ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾವಿರಾರು ಭಕ್ತರ ಕಂಠಸಿರಿಯಲ್ಲಿ ಒಮ್ಮೆಲೆ ಮೊಳಗಿತು.
ಚಿತ್ರ ನಿರ್ಮಾಪಕ ಕೆ.ಮಂಜು ಪಟ್ಟಣದಲ್ಲಿ ಅದ್ಧೂರಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಿದ್ದರು.
ಶನಿವಾರ ಸಂಜೆ ಪಟ್ಟಣದ ಬೇಟೆರಾಯ ಸ್ವಾಮಿ ದೇವಾಲಯದ ಬಳಿ ವಿಶೇಷ ಪೂಜೆ ನೆರವೇರಿಸಿ, ಕೋಲಾಟ, ಭಜನೆ, ಶ್ರೀನಿವಾಸನ ಭಕ್ತಿ ಗೀತೆಗಳನ್ನಾಡುತ್ತಾ ಮಹಿಳೆ, ಪರುಷರಾದಿಯಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ವೇದಿಕೆಯವರೆಗೂ ವಾದ್ಯ ಗೋಷ್ಠಿಯೊಂದಿಗೆ ಸಾಗಿತು.
ವೇದಿಕೆಯಲ್ಲಿ ತಿರುಪತಿ ಮಾದರಿಯ ಗರುಡಾ ನಿಲಯ ಮತ್ತು ಆನಂದ ನಿಲಯ ದೇವಾಲಯವನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಬೆಂಗಳೂರಿನ ಶ್ರೀವಾರಿ ಟ್ರಸ್ಟ್ನಿಂದ ತರಲಾಗಿದ್ದ ಪದ್ಮಾವತಿ ವೆಂಕಟೇಶ್ವರ ದೇವರ ಮೂರ್ತಿಯನ್ನು ಕೂರಿಸಿ ತಿರುಪತಿಯಿಂದ ಬಂದಿದ್ದ ಪೂಜಾರಿಗಳು ದೇವರಿಗೆ ವೇದಘೋಷ ಮಂತ್ರ ಪಟಿಸಿ, ಅಷ್ಟಾರ್ಚನೆ ಪೂಜೆ ಸಲ್ಲಿಸಿದರು.
ನಂತರ ಪದ್ಮಾವತಿ ವೆಂಕಟೇಶ್ವರ ಸ್ವಾಮಿಗೆ ಬಗೆಬಗೆಯ ಹೂ ಮಾಲೆಗಳಿಂದ ವರ್ಣರಂಜಿತವಾಗಿ ಅಲಂಕಾರ ಮಾಡಲಾಗಿತ್ತು. ಸಂಪ್ರದಾಯಬದ್ಧವಾಗಿ ವೆಂಕಟೇಶರ-ಪದ್ಮಾವತಿ ಇಬ್ಬರಿಗೂ ಕಲ್ಯಾಣ ಧಾರೆ ಮಾಡಿಸಿ ಅಷ್ಟಾವಧಾನ, ನೈವೇದ್ಯ ಹಾಗೂ ಮಹಾಮಂಗಳಾರತಿ ಮತ್ತು ಹಲವು ಪೂಜೆ ಕಾರ್ಯಗಳು ನೆರವೇರಿಸಲಾಯಿತು.
ಇದಕ್ಕೂ ಮುನ್ನ ದೀಪಿಕಾ ಪಾಂಡುರಂಗಿ ಅವರಿಂದ ಭಕ್ತ ಸುಧೆ ಹಾಡುಗಾರಿಕೆಗೆ ಎಲ್ಲರ ಮನಸೂರೆಗೊಂಡಿತು. ಈ ವೇಳೆ ಸಿಡಿದ ಬಣ್ಣಬಣ್ಣದ ಪಟಾಕಿಗಳು ವೇದಿಕೆಗೆ ಮತ್ತಷ್ಟು ರಂಗೇರುವಂತೆ ಮಾಡಿತು. ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಡಿ.ರಮೇಶ್ಗೌಡ, ರಾಜ್ಯ ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ನಾರಾಯಣಗೌಡ, ವಿವಿಧ ಪಕ್ಷಗಳ ಮುಖಂಡರಾದ ಎಂ.ಡಿ.ಮೂರ್ತಿ, ಕೊಂಡಜ್ಜಿ ವಿಶ್ವನಾಥ್, ಕಣತೂರ್ಪ್ರಸನ್ನ, ಬ್ಯಾಲಹಳ್ಳಿ ಸೋಮಣ್ಣ, ಬಿಇಒ ಮಂಜುನಾಥ್ ಭಾಗವಹಿಸಿದ್ದರು.
ಈ ವೇಳೆ ಗಣ್ಯರನ್ನು ಕೆ.ಮಂಜು ಅವರು ಶಾಲು ಹೊದಿಸಿ ಸನ್ಮಾನಿಸಿದರು. ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದರು. ದೇವರ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಲಡ್ಡು ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.