ಚಿಕ್ಕಬಳ್ಳಾಪುರ: ಕುರುಬ ಸಮುದಾಯದ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ ಅವರಿಗೆ ಸೋಮವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದ ವೇದಿಕೆ ನಿರಾಕರಿಸಿದಕ್ಕೆ ಆಕ್ರೋಶಗೊಂಡ ಕುರುಬ ಸಮಾಜದ ಜನರು ಕಾರ್ಯಕ್ರಮ ಬಹಿಷ್ಕರಿಸಿದರು.
ನಗರದ ನಂದಿರಂಗ ಮಂದಿರದಲ್ಲಿ ಜಯಂತಿಯ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮೊದಲು ಕುರುಬ ಸಮಾಜದ ಜನರು ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು.
ನಾರಾಯಣಸ್ವಾಮಿ ಅವರಿಗೆ ವೇದಿಕೆ ಮೇಲೆ ಕುಳಿತುಕೊಳ್ಳಲು ಅವಕಾಶ ನಿರಾಕರಿಸಿದ್ದರಿಂದ ಸಮಾಜದ ಮುಖಂಡರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಇದೇ ವೇಳೆ ಮೆರವಣಿಗೆಗೆ ಬಂದಿದ್ದ ಪಲ್ಲಕ್ಕಿಗಳನ್ನು ವಾಪಸ್ ಕಳುಹಿಸಲಾಯಿತು. ಇಷ್ಟಾಗುತ್ತಿದ್ದಂತೆ ಮೆರವಣಿಗೆಯುದ್ದಕ್ಕೂ ಕಳಸ ಹೊತ್ತು ಬಂದಿದ್ದ ಮಹಿಳೆಯರು ವೇದಿಕೆ ಮುಂಭಾಗದಲ್ಲಿ ಇಟ್ಟಿದ್ದ ತಮ್ಮ ಕಳಸಗಳನ್ನು ತೆಗೆದುಕೊಂಡು ಕಾರ್ಯಕ್ರಮದಿಂದ ನಿರ್ಗಮಿಸಿದರು. ಬಳಿಕ ಬೆರಳೆಣಿಕೆ ಜನರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.