ಹರಪನಹಳ್ಳಿ: ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಮಾರಂಭದಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ ಸಾವಿರಾರು ಭಕ್ತರು ಕೆಂಡ ಹಾಯ್ದು ಸೋಮವಾರ ಭಕ್ತಿ ಸಮರ್ಪಿಸಿದರು. ಬೆಳಿಗ್ಗೆ 7 ಗಂಟೆಯಿಂದ ಕೆಂಡ ಹಾಯುವ ಸಮಾರಂಭ ಆರಂಭಗೊಂಡಿತು. 7–8 ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಭಕ್ತರು ಕೆಂಡ ಹಾಯ್ದರು.
ಗುರುಪಾದ್ದೇವರ ಮಠದ ಗಿರೀಶ ಸ್ವಾಮಿ ಪಾಲಿಕೆಯೊಂದಿಗೆ ಕೆಂಡ ಹಾಯ್ದರು. ಸ್ವಾಮೀಜಿ ಅವರಿಂದ ಭಕ್ತರು ಆಶೀರ್ವಾದ ಪಡೆದರು. ಶಸ್ತ್ರ ಚುಚ್ಚಿಸಿಕೊಂಡು ಕೆಲವರು ಭಕ್ತಿ ಮೆರೆದರು.
ದೇವಸ್ಥಾನದ ಧರ್ಮಕರ್ತರಾದ ಪಾಟೀಲ್ ಪರಮೇಶ್ವರಗೌಡ, ಬಸವನಗೌಡ, ಮೇಗಳ ಪೇಟೆಯ ನೂರಾರು ಪುರವಂತರು, ಭಕ್ತರು ಹಾಜರಿದ್ದರು. ಕೆಂಡ ಹಾಯುವಲ್ಲಿ ಅವಘಡ ನಡೆಯದಂತೆ ದೇವಸ್ಥಾನದ ಕಾರ್ಯ ಕರ್ತರು ಮುಂಜಾಗ್ರತೆ ವಹಿಸಿದ್ದರು.