ಮುಂಡರಗಿ: ‘ಬಟ್ಟೆ ಕೊಳೆಯಾದರೆ ಅಗಸನಿಗೆ ಕೊಟ್ಟು ಸ್ವಚ್ಚ ಮಾಡಿಕೊಳ್ಳುತ್ತೇವೆ. ಹಾಗೆಯೇ ಮನಸ್ಸು ಮಲೀನವಾದರೆ ಆಧ್ಯಾತ್ಮ ಚಟುವಟಿಕೆಗಳಲ್ಲಿ ಭಾಗವಹಿಸಬೇಕು’ ಎಂದು ಗದುಗಿನ ಆಧ್ಯಾತ್ಮ ಆಶ್ರಮದ ನೀಲಮ್ಮತಾಯಿ ಅಸುಂಡಿ ಅಭಿಪ್ರಾಯಪಟ್ಟರು. ಅನ್ನದಾನೀಶ್ವರ ಮಠದಲ್ಲಿ ನಡೆದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅರಿವಿನ ಹಸಿವು ಅನುಭಾವದಿಂದ ತುಂಬುತ್ತದೆ. ಪಾಂಡಿತ್ಯಕ್ಕೂ ಅನುಭಾವಕ್ಕೂ ತುಂಬಾ ವ್ಯತ್ಯಾಸವಿದೆ. ಅನುಭಾವದ ಮುಂದೆ ಪಾಂಡಿತ್ಯ ಸೋಲುತ್ತದೆ. ಅನುಭಾವ ನಮ್ಮೆಲ್ಲರ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅನುಭವವಿಲ್ಲದ ಆಚಾರ, ಪ್ರಾಮಾಣಿಕತೆ ಇಲ್ಲದ ಪೂಜೆ, ಸ್ವಾರ್ಥವಿಲ್ಲದ ಕಾಯಕ ಶ್ರೇಷ್ಠ’ ಎಂದು ಅವರು ಹೇಳಿದರು.
‘ಶರಣೆ ನೀಲಮ್ಮ ತಾಯಿ ಅಸುಂಡಿ ಅವರದ್ದು ಬಹುಮುಖ ವ್ಯಕ್ತಿತ್ವ. ಅವರ ಆಧ್ಯಾತ್ಮ ಸಾಧನೆಗಾಗಿ ಚನ್ನೈ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ’ ಎಂದು ಅನ್ನದಾನೀಶ್ವರ ಸ್ವಾಮೀಜಿ ಶ್ಲಾಘಿಸಿದರು. ಭಕ್ತಿ ಸೇವೆ ವಹಿಸಿಕೊಂಡಿದ್ದ ಕೊಪ್ಪಳ ಬಂಧುಗಳನ್ನು ಶ್ರೀಗಳು ಸನ್ಮಾನಿಸಿದರು.