ನರಗುಂದ: ‘ಸ್ವಾರ್ಥ ರಾಜಕೀಯಕ್ಕೆ ರೈತರು ಬಲಿ ಪಶುಗಳಾಗುತ್ತಿದ್ದಾರೆ. ಪ್ರತಿ ವಿಷಯದಲ್ಲಿ ರೈತರನ್ನು ಮೋಸಗೊಳಿಸುವ ಕುತಂತ್ರ ನಡೆಯುತ್ತಿದೆ’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಹನಮಂತ ಸರನಾಯ್ಕರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 845ನೇ ದಿನವಾದ ಸೋಮವಾರ ಅವರು ಮಾತನಾಡಿದರು. ‘ಜನಪ್ರತಿನಿಧಿಗಳಿಂದ ರೈತರ ಉದ್ದಾರ ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಸರ್ಕಾರಕ್ಕೆ ಇನ್ನಷ್ಟು ಬಿಸಿ ಮುಟ್ಟಿಸುವಂತೆ ಹೋರಾಟ ಚುರುಕುಗೊಳಿಸಬೇಕು’ ಎಂದರು.
‘ಈ ಭಾಗದ ಶಾಸಕರು, ಸಂಸದರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಹೋರಾಟ ಹತ್ತಿಕ್ಕುವ ಕುತಂತ್ರ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ನಾವು ಬಗ್ಗುವುದಿಲ್ಲ’ ಎಂದು ಸಿದ್ದಪ್ಪ ಚಂದ್ರತ್ನವರ ಹೇಳಿದರು.