ದಾವಣಗೆರೆ: ವೀರಶೈವ ಸಮಾಜದ ವಿರುದ್ಧ ಅವಾಚ್ಯ ಶಬ್ದ ಬಳಸಿರುವ ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬಹಿರಂಗವಾಗಿ ಕ್ಷಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಸಮಾಜದ ಮುಖಂಡ ಹಂಪಯ್ಯ ಸ್ವಾಮಿ ಎಚ್ಚರಿಕೆ ನೀಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸವಣ್ಣ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಪ್ರಸ್ತುತ ಕೆಲವು ಮಠಾಧೀಶರು, ರಾಜಕೀಯ ಮುಖಂಡರು ಬಸವಣ್ಣನ ಹೆಸರಲ್ಲಿ ಪ್ರತ್ಯೇಕ ಜಾತಿ ಧರ್ಮ ಹುಟ್ಟುಹಾಕಲು ಹೊರಟಿರುವುದು ಖಂಡನೀಯ’ ಎಂದರು.
‘ಸ್ವಾರ್ಥಕ್ಕಾಗಿ ವೀರಶೈವ ಸಮಾಜವನ್ನು ಅವಹೇಳನ ಮಾಡಿರುವ ಕೂಡಲ ಸಂಗಮ ಸ್ವಾಮೀಜಿ ಕಾವಿ ಕಳಚಿ ರಾಜಕೀಯ ಸೇರಬೇಕು. ಇಲ್ಲವಾದರೆ, ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ’ ಹಂಪಯ್ಯ ಎಚ್ಚರಿಕೆ ನೀಡಿದರು.
ಖಾವಿಗೆ ಪವಿತ್ರ ಸ್ಥಾನವಿದೆ. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಇಡೀ ಸಮಾಜವೇ ಮುನ್ನಡೆಯುತ್ತದೆ. ಯೋಗ್ಯತೆ ಇಲ್ಲದವರು ಖಾವಿ ಧರಿಸಿದರೆ ಇಂತಹ ಅನಾಹುತಗಳು ನಡೆಯುತ್ತವೆ ಎಂದು ವಾಗ್ದಾಳಿ ನಡೆಸಿದರು.
ಮುಖಂಡ ಹಾಲಸ್ವಾಮಿ ಮಾತನಾಡಿ, ‘ಸಮಾಜವನ್ನು ಸರಿದಾರಿಗೆ ತರಬೇಕಾದವರೇ ಸಮಾಜವನ್ನು ಒಡೆಯಲು ಹೊರಟಿರುವುದು ಖಂಡನೀಯ. ರಾಜಕಾರಣಿಗಳಿಂದ ಹಣಪಡೆದು ಶ್ರೀಗಳು ದ್ರೋಹ ಎಸಗಿದ್ದಾರೆ’ ಎಂದು ಆರೋಪಿಸಿದರು.